ರಾಜಕೀಯ ವರದಿಗಾರಿಕೆ: ಪತ್ರಕರ್ತೆಯರಿಗೆ ಸಲಹೆ

ವಿಜಯಪುರ: ಪತ್ರಕರ್ತೆಯರು ರಾಜಕೀಯ ವರದಿಗಾರಿಕೆ ಬಗ್ಗೆ ಆಸಕ್ತಿ ಬೆಳಸಿಕೊಂಡು, ಅಲ್ಲಿನ ಆಗು-ಹೋಗು ಗಳನ್ನು ತಿಳಿದುಕೊಂಡಾಗ ಮಾತ್ರ ಉತ್ತಮ ರಾಜಕೀಯ ವರದಿಗಳನ್ನು ಮಾಡಲು ಸಾಧ್ಯ ಎಂದು ಹಿರಿಯ ಪತ್ರಕರ್ತೆ ಡಾ. ಆಶಾ ಕೃಷ್ಣಸ್ವಾಮಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹಮ್ಮಿಕೊಂಡಿದ್ದ ರಾಜಕೀಯ ವರದಿಗಾರಿಕೆ ಮತ್ತು ಮಹಿಳೆ ಎಂಬ ವಿಷಯದ ಕುರಿತ ಆನ್ ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಮಾಧ್ಯಮದ ಯಾವುದೇ ವಿಭಾಗದಲ್ಲಿ ಕೆಲಸ ಮಾಡುವ ಮೊದಲು ಅದರಲ್ಲಿ ಆಸಕ್ತಿ ಇರಬೇಕು. ಜೊತೆಗೆ ಆಯಾ ಕ್ಷೇತ್ರಗಳ ಬಗ್ಗೆ ತಿಳಿದುಕೊಂಡಿರಬೇಕು. ಮುಂಬರುವ ಯುವ ಪತ್ರಕರ್ತರು ಅದರಲ್ಲೂ ಮಹಿಳೆಯರು ಹೆಚ್ಚಾಗಿ ರಾಜಕೀಯ ವರದಿಗಾರಿಕೆಯಲ್ಲಿ ತೊಡಗಬೇಕು. ಆಗ ಅವರಿಗೆ ನಿಜವಾದ ಪತ್ರಕರ್ತರ ಅನುಭವ ಆಗುತ್ತದೆ' ಎಂದರು.
'ರಾಜಕೀಯ ವರದಿ ಎಂದರೆ ಕೇವಲ ರಾಜಕೀಯ ಪಕ್ಷಗಳಲ್ಲಾಗುವ ಬದಲಾವಣೆ ಹೇಳುವುದಲ್ಲ. ಅದರೊಂದಿಗೆ ಕ್ಯಾಬಿನೆಟ್ ಸಭೆಗಳು, ಬಜೆಟ್ ಮಂಡನೆ, ಹೊಸ ಯೋಜನೆಗಳ ಅನುಷ್ಠಾನ, ಆರ್ಥಿಕ ಸ್ಥಿತಿಗತಿ ಹೀಗೆ ಪ್ರತಿಯೊಂದು ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು, ವರದಿ ಮಾಡಬೇಕು' ಎಂದು ಹೇಳಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಗೌಡ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೋಲಾರ, ಸಂದೀಪ್ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ, ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.