ನಿಡಗುಂದಿ: ‘ಹನ್ನೊಂದು ಬಾರಿ ಚುನಾವಣಾ ರಾಜಕಾರಣದಲ್ಲಿ ಒಮ್ಮೆ ಮಾತ್ರ ಸೋತು ಹತ್ತು ಸಲ ಗೆದ್ದು 4 ರಿಂದ 5 ಖಾತೆಯ ಮಂತ್ರಿಯಾಗಿ, 3-4 ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿ 45 ವರ್ಷ ಸಾರ್ಥಕ ಜನಸೇವೆ ಮಾಡಿರುವೆ. ಸದ್ಯ ನನಗೆ ಇದು ಅನಿವಾರ್ಯವಾದ ಕಾರ್ಯಕ್ಷೇತ್ರವಲ್ಲ. ಪುನಃ ಆಶೀರ್ವಾದ ಮಾಡದಿದ್ದರೆ ಮಕ್ಕಳೊಂದಿಗೆ ಹೊಲದಲ್ಲಿ ಗಳೆ ಹೊಡೆಯೋದಕ್ಕೆ ಹೋಗಲೂ ನಾನು ಸಿದ್ಧ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ತಾಲ್ಲೂಕಿನ ಅಂಗಡಗೇರಿಯ ಪವಾಡ ಬಸವೇಶ್ವರ ಪುಣ್ಯಾಶ್ರಮದ ಸಮುದಾಯ ಭವನದಲ್ಲಿ ಬುಧವಾರ ನಡೆದ ಬಸವನ ಬಾಗೇವಾಡಿ ಬಿಜೆಪಿ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಸೂರ್ಯ-ಚಂದ್ರರಿಗೆ ಗ್ರಹಣ ಎದುರಾಗುತ್ತದೆ. ಅದೇ ರೀತಿ ಕಳೆದ ಚುನಾವಣೆಯಲ್ಲಿ ನನಗಾದ ಸೋಲಿನಿಂದ ಯಾರೂ ಹತಾಶರಾಗಬಾರದು. ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಸಂಸತ್ ಚುನಾವಣೆಯಲ್ಲಿ ಪುನಃ ಗೆಲುವು ಸಾಧಿಸಲು ಈಚೆಗೆ ನಡೆದ ಗೊಳಸಂಗಿ ಗ್ರಾ.ಪಂ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಒಂದು ದಿಕ್ಸೂಚಿಯಾಗಲಿ. ಸಂಸತ್ ಚುನಾವಣೆ ಬಳಿಕ ರಾಜ್ಯದ ಗ್ಯಾರಂಟಿಗಳೆಲ್ಲ ಹಳ್ಳ ಹಿಡಿದು ಸರ್ಕಾರ ಪತನಗೊಳ್ಳುವುದು ನಿಶ್ಚಿತ’ ಎಂದರು.
ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಸಂಜಯ ಪಾಟೀಲ (ಕನಮಡಿ), ಬೆಳಗಾವಿ ವಿಭಾಗೀಯ ಪ್ರಬಾರಿ ಚಂದ್ರಶೇಖರ ಕವಟಗಿ, ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಬಸವರಾಜ ಅಮಲಝರಿ, ವಿನೋದ ಭಜಂತ್ರಿ ಮಾತನಾಡಿದರು.
ಪ್ರಮುಖರಾದ ಬಸವರಾಜ ಬಿರಾದಾರ, ಬೀರಪ್ಪ ಸಾಸನೂರ, ಕಾಶಿರಾಯ ದೇಸಾಯಿ, ಬಸವರಾಜ ಬಾಗೇವಾಡಿ, ನಂದಬಸಪ್ಪ ಚೌಧರಿ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಕ್ಷೇತ್ರದ ವಿವಿಧ ಗ್ರಾಮ ಪಂಚಾಯ್ತಿ ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತರಿಗೆ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸನ್ಮಾನಿಸಿದರು. ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.