ಸಿಂದಗಿ: ನಾಡಿನಲ್ಲಿ ನಿಷ್ಪಕ್ಷಪಾತ ಪತ್ರಿಕೆ ಎಂದೇ ಹೆಸರು ಮಾಡಿ, ಪತ್ರಿಕಾ ಧರ್ಮ ಉಳಿಸಿಕೊಂಡು ಯಾವುದೇ ಸಿದ್ಧಾಂತಕ್ಕೂ ಜೋತು ಬೀಳದೇ ಜನರ ಶಕ್ತಿಯುತ ಧ್ವನಿಯಾಗಿರುವ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ಅದುವೇ ‘ಪ್ರಜಾವಾಣಿ’ ಎಂದುಕನ್ನಡ ಸಾಹಿತ್ಯ ಪರಿಷತ್ ಸಿಂದಗಿ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಅಭಿಪ್ರಾಯಪಟ್ಟರು.
ಇಲ್ಲಿಯ ಎಲೈಟ್ ವಿಜ್ಞಾನ ಪಿಯು ಕಾಲೇಜಿನಲ್ಲಿ ಶನಿವಾರ ಮಂದಾರ ಪ್ರತಿಷ್ಠಾನ, ನಬಿರೋಶನ್ ಪ್ರಕಾಶನ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ, ‘ಪ್ರಜಾವಾಣಿ‘ ಅಮೃತ ಮಹೋತ್ಸವ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಜಾವಾಣಿ’ ಸಂಸ್ಥಾಪಕರಾದ ಕೆ.ಎನ್.ಗುರುಸ್ವಾಮಿ ಸದಾ ಸ್ಮರಣೀಯರು. ಈ ಪತ್ರಿಕೆ ಓದಿ ಬರವಣಿಗೆ ಕಲಿತಿರುವೆ, ಮಾತು ಕಲಿತಿರುವೆ ಎಂದರು.
ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಮಾತನಾಡಿ, ‘ಪ್ರಜಾವಾಣಿ‘ ಸಮಾಜಮುಖಿ, ಯಾವತ್ತೂ ರಾಜೀ ಮಾಡಿಕೊಳ್ಳದ ಅಪರೂಪದ ಪತ್ರಿಕೆಯಾಗಿದೆ ಎಂದರು.
ವಿಜಯಪುರ-ಧಾರವಾಡ ಸ್ಪರ್ಧಾತ್ಮಕ ಅಕಾಡೆಮಿ ಸಂಚಾಲಕ ಶರಣಯ್ಯ ಭಂಡಾರಿಮಠ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕೆಂದರೆ ಪ್ರಜಾವಾಣಿ ಪತ್ರಿಕೆ ಅಗತ್ಯವಾಗಿ ಓದಲೇ ಬೇಕುಎಂದರು.
ಎಲೈಟ್ ಶಿಕ್ಷಣ ಸಂಸ್ಥೆಯ ಸಂಚಾಲಕ ಮಹಿಬೂಬ ಅಸಂತಾಪೂರ, ಕನ್ನಡ ಭಾಷೆ ಅತ್ಯಂತ ಶಕ್ತಿಶಾಲಿಯಾಗಿದೆ. ಅದರ ರಕ್ಷಣೆ ಅವಶ್ಯಕತೆ ಇಲ್ಲ. ಭಾಷೆಯನ್ನು ಉಳಿಸಿ-ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗ ಮಾಡಲೇಬೇಕಾದ ಕರ್ತವ್ಯ ಎಂದರು.
ಪ್ರಶಸ್ತಿ ಪ್ರದಾನ:
‘ಕಾಮಿಡಿ ಕಿಲಾಡಿ’ ಖ್ಯಾತಿಯ ಶಿವಾನಂದ ಸಿಂದಗಿ, ಶಿಕ್ಷಣ ಕ್ಷೇತ್ರದ ಸಾಧಕ ಶರಣಯ್ಯ ಭಂಡಾರಿಮಠ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಡಾ.ಅನೀಲ ನಾಯಕ (ವೈದ್ಯಕೀಯ), ಸಂತೋಷ ಮಣಿಗಿರಿ (ಸಂಘಟನೆ), ಬಸವರಾಜ ಅಗಸರ (ಸಂಕೀರ್ಣ), ಪ್ರಕಾಶ ಐರೋಡಗಿ (ಕ್ರೀಡೆ), ವೀರೇಶ ವಾಲಿ (ಸಂಗೀತ), ಈರನಗೌಡ ಪಾಟೀಲ (ಸಾಹಿತ್ಯ) ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಪ್ರದಾನ ಮಾಡಿದರು.
ಇದೇ ವೇಳೆ ಸಿದ್ಧಲಿಂಗ ಕಿಣಗಿ, ಸೈನಾಬಿ ಮಸಳಿ, ಬಿ.ಆರ್.ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಕರವೇ ಪ್ರಮುಖ ಸದ್ದಾಂ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಂಪೂರ ಪಿ.ಎ ಆರೂಢಮಠದ ನಿತ್ಯಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶಾಸಕ ರಮೇಶ ಭೂಸನೂರ ಸಮಾರಂಭ ಉದ್ಘಾಟಿಸಿದರು.ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಆಕಾಶ ಸಂಯೋಜಿಸಿದ ಸಾಮೂಹಿಕ ನೃತ್ಯ ಗಮನ ಸೆಳೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.