ಇಂಡಿ: ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳ 25 ಗ್ರಾಮಗಳಿಗೆ ಪ್ರತಿದಿನ 50 ಟ್ಯಾಂಕರ್ ಮೂಲಕ 106 ಟ್ರಿಪ್ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗುರುವಾರ ಟಾಸ್ಕ್ ಫೋರ್ಸ್ ಸಮಿತಿಯಿಂದ ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, ನೀರಿನ ಬಗ್ಗೆ ತಾತ್ಸಾರ ಬೇಡ. ಹಿರೇಬೇವನೂರ, ಅಥರ್ಗಾ ಮತ್ತು ಹೋರ್ತಿ ಸೇರಿದಂತೆ ತಾಲ್ಲೂಕಿನಲ್ಲಿರುವ ವಸತಿ ನಿಲಯಗಳಿಗೆ ಬೇಡಿಕೆಯ ಅನುಗುಣವಾಗಿ ನೀರನ್ನು ಪೂರೈಸಲಾಗುತ್ತಿದೆ. ನೀರು ಪೂರೈಸುವ ಆ್ಯಪ್ ಬಳಸಬೇಕು. ಕಿ.ಮೀ ತಿಳಿಸಬೇಕು. ಅಂದರೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ’ ಎಂದರು.
ಟ್ಯಾಂಕರ್ಗಳಿಗೆ ಜಿ.ಪಿ.ಎಸ್ ಅಳವಡಿಸಿ ಏಜೆನ್ಸಿ ಜಿ.ಪಿ.ಎಸ್ ನಲ್ಲಿ ಗುರುತಿಸಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಟ್ಯಾಂಕರ್ ಆ್ಯಪ್ ಉಪಯೋಗಿಸುವ ಕುರಿತು ಮಾಹಿತಿ ನೀಡಿದರು.
ಕೆಬಿಜೆಎನ್ ಎಲ್ ರಾಂಪೂರದ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ‘ನಾರಾಯಣಪುರ ಜಲಾಶಯದಲ್ಲಿ ಕುಡಿಯುವ ನೀರಿನ ಕುರಿತು ನೀರು ಇದೆ. ಅಧಿಕಾರಿಗಳು ಒಂದು ವಾರ ಮುಂಚಿತವಾಗಿ ತಿಳಿಸಿದರೆ ಬೇಡಿಕೆ ಅನುಗುಣವಾಗಿ ಕುಡಿಯುವ ನೀರು ಪೂರೈಸಲಾಗುವುದು’ ಎಂದರು.
‘ಈಗಾಗಲೇ ಹಂಜಗಿ ಕೆರೆಯಲ್ಲಿ 4 ಮೀಟರ್, ಸಂಗೋಗಿ, ಅರ್ಜನಾಳ ಕೆರೆಯಲ್ಲಿ ಶೇ 50ರಷ್ಟು, ಲೋಣಿ ಕೆರೆಯಲ್ಲಿ ಶೇ 75 ರಷ್ಟು ನೀರಿದೆ ಮತ್ತು ನೀರು ಮಾರ್ಚ್ 31 ರ ವರೆಗೆ ಕುಡಿಯಲು ಸಾಕಾಗುತ್ತದೆ. ಕಂದಾಯ ಗ್ರಾಮಗಳಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಪೂರೈಕೆಯಾಗುತ್ತಿದೆ’ ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಮಹಾದೇವಪ್ಪ ಏವೂರ, ಹೆಸ್ಕಾಂನ ಎಸ್.ಆರ್.ಮೆಂಡೆಗಾರ, ತೋಟಗಾರಿಕೆಯ ಎಚ್.ಎಸ್.ಪಾಟೀಲ, ಪಶು ಇಲಾಖೆಯ ಬಿ.ಎಚ್. ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಉಪಸ್ಥಿತರಿದ್ದರು.