ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಾರೂಢ ಶಿವಾಜಿ ಮೂರ್ತಿ ಅನಾವರಣ

ಐತಿಹಾಸಿಕ ಕುರುಹಗಳ ರಕ್ಷಣೆಗೆ ಕ್ರಮ: ನಡಹಳ್ಳಿ
Last Updated 23 ಮಾರ್ಚ್ 2023, 16:01 IST
ಅಕ್ಷರ ಗಾತ್ರ

ತಾಳಿಕೋಟೆ: ವಿಜಯನಗರ ಸಾಮ್ರಾಜ್ಯದ ವೈಭವವನ್ನು ಐತಿಹಾಸಿಕ ತಾಳಿಕೋಟೆ ಪಟ್ಟಣದಲ್ಲಿ ಮರಳಿ ತರಲು ಸಂಕಲ್ಪ ಮಾಡಲಾಗಿದ್ದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈಗಾಗಲೇ ಪಟ್ಟಣದ ಸಮಗ್ರ ಅಭಿವೃದ್ದಿ ಮಾಡಲಾಗಿದ್ದು ಐತಿಹಾಸಿಕ ಕುರುಹಗಳನ್ನು ರಕ್ಷಿಸಿ ಮುಂದಿನ ಪಿಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಶಿವಾಜಿ ವೃತ್ತದಲ್ಲಿ ಅಶ್ವಾರೂಢ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮಾಡಿ ಅವರು ಬುಧವಾರ ಸಂಜೆ ಮಾತನಾಡಿದರು.

ಇತಿಹಾಸ ಪ್ರಸಿದ್ಧ ತಾಳಿಕೋಟೆ ಯುದ್ದದ ಮಾಹಿತಿಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಪಟ್ಟಣದ ಎಲ್ಲ ವರ್ಗದ ಜನರೂ ಪಟ್ಟಣದ ಅಭಿವೃದ್ಧಿಗೆ ಸಂಕಲ್ಪ ಮಾಡಿ. ಮುಂದಿನ ಒಂದು ವರ್ಷದಲ್ಲಿ ಪಟ್ಟಣ ಹಸಿರಿನಿಂದ ಸ್ವಚ್ಛತೆಯಿಂದ ಕಂಗೊಳಿಸುವಂತೆ ಮಾಡುವೆ ಎಂದರು.

ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ಹುಟ್ಟಿ ಬಂದವರು ಶಿವಾಜಿ ಮಹಾರಾಜರು ತಮ್ಮ ಶಕ್ತಿ ಸಾಮರ್ಥ್ಯದಿಂದ ಹಿಂದೂ ಸಾಮ್ರಾಜ್ಯದ ರಕ್ಷಣೆಗೆ ಪಣ ತೊಟ್ಟರು. ಅವರ ಹೋರಾಟದ ಬದುಕನ್ನು ಮುಂದಿನ ಪೀಳಿಗೆ ಮರೆಯದೇ ಉಳಿಯಲು ಅಂತಹ ಮಹನೀಯರ ಮೂರ್ತಿಗಳನ್ನು ಅನಾವರಣ ಮಾಡುವ ಮೂಲಕ ಗೌರವ ನೀಡಲಾಗಿದೆ ಎಂದು ಹೇಳಿದರು.

ನಾಲತವಾಡ-ಮುದ್ದೇಬಿಹಾಳ ಅಭಿವೃದ್ಧಿಯಾಗಿವೆ. ಯಾವ ಶಾಸಕರೂ ತರದಷ್ಟು ಅನುದಾನವನ್ನು ತಂದು ಅಭಿವೃದ್ದಿಪಡಿಸಲಾಗಿದೆ. ಸ್ವತ: ಮುಖ್ಯಮಂತ್ರಿಗಳೇ ಶ್ಲಾಘಿಸಿದ್ದಾರೆ. ಪ್ರತಿ ಊರೂರುಗಳಲ್ಲಿ ಅಭಿವೃದ್ಧಿ ಪರ್ವ ಶರವೇಗದಲ್ಲಿ ಮಾಡಿದೆ. ಐದು ವರ್ಷದ ಅವಧಿಯಲ್ಲಿ ಇಷ್ಟು ಕೆಲಸ ಮಾಡಿರುವೆ. ಪಟ್ಟಣಕ್ಕೆ ಸಬ್ ರಿಜಿಸ್ಟ್ರಾರ್‌ ಕಚೇರಿ ಮಂಜೂರಾಗಿದೆ. ಸದ್ಯದಲ್ಲಿಯೇ ಕೋರ್ಟ್‌ ಪ್ರಾರಂಭವಾಗಲಿದೆ. ಪುರಸಭೆಯ ಹಳೆಯ ಕಟ್ಟಡದ ಸ್ಥಳದಲ್ಲಿ ಮಿನಿ ವಿಧಾನಸೌಧ ಮಾಡಿ ಎಲ್ಲ ಕಚೇರಿಗಳನ್ನು ಒಂದೇ ಕಡೆ ಇರುವಂತೆ ಮಾಡಿ ಜನತೆಗೆ ಅನುಕೂಲ ಮಾಡಿಕೊಡುವೆ. ಪಟ್ಟಣದ ಪ್ರತಿ ವಾರ್ಡ್‌ಗಳಲ್ಲಿ ರಸ್ತೆ ಕೆಲಸಗಳು ಶೇ 70ರಷ್ಟಾಗಿವೆ. ಉಳಿದ ಶೇ 30ರಷ್ಟು ಕೆಲಸಗಳಿಗೂ ಗುದ್ದಲಿಪೂಜೆ ಮಾಡಿರುವೆ ಎಂದರು.

ರೈತರ, ರೈತ ಮಹಿಳೆಯರ ಅಭಿವೃದ್ದಿಗೆ ಪಣ: ಮತಕ್ಷೇತ್ರದಲ್ಲಿ ಸಮಗ್ರ ನೀರಾವರಿ ಮಾಡುವ ಮೂಲಕ ರೈತರ ಜಮೀನುಗಳಿಗೆ ನೀರುಣಿಸುವ ಕಾರ್ಯ ಮಾಡಲಾಗಿದೆ. ಗ್ರಾಮೀಣ ಮಹಿಳೆಯರ ಸ್ವಾವಲಂಭಿತನಕ್ಕಾಗಿ ಹಸು ವಿತರಣೆ ಮಾಡಲಾಗುವುದು. ರೈತರ ಜಮೀನುಗಳ ನೀರಾವರಿಗೆ ತ್ರಿಫೇಸ್ ವಿದ್ಯುತ್ ಸರಬರಾಜಿಗೆ ಕ್ರಮ ವಹಿಸಲಾಗಿದೆ. ಮತಕ್ಷೇತ್ರದ ಅಭಿವೃದ್ಧಿಗಾಗಿ ನಿತ್ಯ 16 ಗಂಟೆ ಕೆಲಸ ಮಾಡಿರುವೆ ಎಂದರು.

ನಮ್ಮ ಕೆಲಸಗಳಿಗೆ ನಾವೇನೂ ಬೇರೆ ಗ್ಯಾರಂಟಿ ಕೊಡುವುದು ಬೇಕಿಲ್ಲ. ಮಾಡಿರುವ ಕೆಲಸಗಳೇ ಗ್ಯಾರಂಟಿ. 10 ವರ್ಷದಲ್ಲಿ ಶ್ರೀಮಂತ, ಅಭಿವೃದ್ಧಿ ಹೊಂದಿದ ತಾಲ್ಲೂಕನ್ನಾಗಿಸುವೆ. ಇಲ್ಲಿನ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆ ವ್ಯವಸ್ಥೆ ಜಾರಿ ಮಾಡುವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗುಂಡಕನಾಳ ಗುರುಲಿಂಗಶ್ರೀಗಳು ಮಾತನಾಡಿ, ಪ್ರತಿ ಮನೆಯಲ್ಲಿ ತಾಯಂದಿರು ವೀರ ಶಿವಾಜಿಯಂತಹ ಮಕ್ಕಳನ್ನು ಬೆಳೆಸಿ ಎಂದರು.

ಕೆಸರಟ್ಟಿ ಶಂಕರಲಿಂಗ ಸ್ವಾಮಿಗಳು ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಕಲಿಸಿದ ನೆಲ ಭಾರತ ದೇಶವಿದು. ಪಟ್ಟಣದಲ್ಲಿ ಜಗತ್ತಿಗೆ ಗುರುವಾದ ಬಸವೇಶ್ವರ ಮೂರ್ತಿಯ ನಂತರ, ಹಿಂದವೀ ಸಾಮ್ರಾಜ್ಯ ಸಂಸ್ಥಾಪಕ ಹಿಂದೂ ರಕ್ಷಕ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಬಾಲಕಿ ಸನ್ನಿಧಿ ಮಾನೆ, ಯುವತಿ ತೇಜಶ್ವಿನಿ ಡಿಸಲೆ ಮಾತನಾಡಿದರು. ಮೂಕಿಹಾಳ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಹಗರಗುಂಡದ ದಿನೇಶ ಚವಾಣ ರಚಿಸಿದ ಶಿವಾಜಿ ಭಾವಚಿತ್ರದ ಅನಾವರಣವಾಯಿತು. ಪಟ್ಟಣದ ಸಮಾಜದ ಪ್ರಮುಖರನ್ನು ಶಿವಾಜಿ ಮೂರ್ತಿ ನಿರ್ಮಾಣಕ್ಕೆ ಕಾರಣರಾದ ಶಾಸಕರನ್ನು ವಿವಿಧ ಸಂಘಟೆನಗಳ ಪರವಾಗಿ ಗೌರವಿಸಲಾಯಿತು.

ಅರ್ಚಕ ಸಂತೋಷಭಟ್ ಜೋಶಿ, ರಾಷ್ಟ್ರೀಯ ಕ್ಷತ್ರಿಯ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಘಾಟಗೆ, ಸ್ಥಳೀಯ ಮರಾಠಾ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ, ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಇತರರಿದ್ದರು. ಪುರಸಭೆ ಸದಸ್ಯ ಅಣ್ಣಪ್ಪ ಜಗತಾಪ, ಅಶೋಕ ಹಂಚಲಿ ಮತ್ತು ಮಹಾಂತೇಶ ಮುರಾಳ ಇದ್ದರು.

ಭವ್ಯ ಮೆರವಣಿಗೆ: ಎಪಿಎಂಸಿ ಸಭಾಭವನದಿಂದ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಮೆರವಣಿಗೆ ಮೂಲಕ ಕರೆ ತರಲಾಯಿತು.

ಮೆರವಣಿಗೆಗೆ ಖಾಸ್ಗತೇಶ್ವರಮಠದ ಸಿದ್ಧಲಿಂಗದೇವರು ಚಾಲನೆ ನೀಡಿದರು. ಅಲ್ಲಿಂದ ಬಸವೇಶ್ವರ ವೃತ್ತ, ಡಾ..ಬಿ.ಆರ್.ಅಂಬೇಡ್ಕರ ವೃತ್ತ, ಕತ್ರಿ ಬಜಾರ ಮೂಲಕ ಹಾಯ್ದು ಶಿವಾಜಿ ವೃತ್ತಕ್ಕೆ ಆಗಮಿಸಲಾಯಿತು. ಮೆರವಣಿಗೆಯಲ್ಲಿ ನಾಶಿಕ್ ಡೋಲ್, ಉಡುಪಿಯ ಸಾಂಸ್ಕೃತಿಕ ತಾಳ, ಪಟ್ಟಣಿಗರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT