ವಿಜಯಪುರ: ಇಲ್ಲಿನ ಐತಿಹಾಸಿಕ ಸ್ಮಾರಕ ಗೋಳಗುಮ್ಮಟದ ಮುಂಭಾಗದಲ್ಲಿ ಇರುವ ವಸ್ತುಸಂಗ್ರಹಾಲಯದ ಮೇಲ್ ಐಡಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ‘ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶವಾಗಿದೆ. ಶುಕ್ರವಾರ ರಾತ್ರಿಯೇ ಬೆದರಿಕೆ ಸಂದೇಶ ಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯದಳ, ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲಿಸಿದೆ. ಅಗತ್ಯ ಭದ್ರತೆಯನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
‘ಭಾರತದಾದ್ಯಂತ ಇರುವ ವಿವಿಧ ವಸ್ತುಸಂಗ್ರಹಾಲಯಗಳ ಮೇಲ್ ಐಡಿಗಳಿಗೆ ಒಂದೇ ಇ ಮೇಲ್ನಿಂದ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ವಿಜಯಪುರ ಗೋಳಗುಮ್ಮಟ ಮ್ಯೂಸಿಯಂನ ಇ–ಮೇಲ್ ಐಡಿಗೂ ಬಂದಿದೆ. ಬೆದರಿಕೆ ಇ–ಮೇಲ್ ಅನ್ನು ಪರಿಶೀಲಿಸಲಾಗಿದ್ದು, ಇದು ಹುಸಿ ಬೆದರಿಕೆ ಸಂದೇಶ ಎಂಬುದು ಖಚಿತವಾಗಿದೆ’ ಎಂದರು.
‘ಹುಸಿ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಎನ್ಸಿ ದಾಖಲಿಸಲಾಗಿದೆ ಮತ್ತು ಕೋರ್ಟ್ ಅನುಮತಿಯ ನಂತರ ಎಫ್ಐಆರ್ ದಾಖಲಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ