ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಹಾಗೂ ಈಗಾಗಲೇ ರೆಡ್ ಜೋನ್ ಎಂದು ಗುರುತಿಸಿಕೊಂಡಿರುವುದರಿಂದ ರಾಜ್ಯ ಸರ್ಕಾರ ಗಂಟಲುದ್ರವ ಪರೀಕ್ಷಾ ಪ್ರಯೋಗಾಲಯವನ್ನು ಜಿಲ್ಲೆಗೆ ಮಂಜೂರು ಮಾಡಿದೆ.
ಜಿಲ್ಲಾಸ್ಪತ್ರೆಯಲ್ಲಿ ‘ಸಿಬಿ ನ್ಯಾಟ್’ ಎಂಬ ಪ್ರಯೋಗಾಲಯ ಶನಿವಾರದಿಂದಲೇ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಈ ಪ್ರಯೋಗಾಲಯದಲ್ಲಿ ಒಂದು ಸುತ್ತಿನಲ್ಲಿ 20ರಿಂದ 24 ಪರೀಕ್ಷೆಗಳನ್ನು ಒಮ್ಮೆಗೆ ಮಾಡಬಹುದಾಗಿದೆ. ಇದರಿಂದ ತುರ್ತು ರೋಗಿಗಳ ತಪಾಸಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದುವರೆಗೆ ಗಂಟಲುದ್ರವ ಪರೀಕ್ಷೆಗಾಗಿ ಕುಲಬುರಗಿ, ಬೆಂಗಳೂರನ್ನು ಅವಲಂಬಿಸಬೇಕಾಗಿತ್ತು. ಇದೀಗ ಇಲ್ಲಿಯೇ ಪ್ರಯೋಗಾಲಯ ಆರಂಭವಾಗಿರುವುದು ನಿಟ್ಟುಸಿರುವ ಬಿಡುವಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಮತ್ತು ಜಿಲ್ಲೆಯ ಅಧಿಕಾರಿಗಳ ಸತತ ಪ್ರಯತ್ನದ ಫಲವಾಗಿ ಪ್ರಯೋಗಾಲಯ ಆರಂಭವಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅನುಕೂಲವಾಗಿದೆ.