ಗುರುಮಠಕಲ್: ಭಾನುವಾರ ಪಟ್ಟಣದ ಕಾಕಲವಾರ ಬೇಸ್ ಬಡಾವಣೆಯ ಬಾಲಕಿಯ(13 ವರ್ಷ) ವಿವಾಹ ಜರುಗಲಿರುವ ಕುರಿತು ಸಹಾಯವಾಣಿ ಮೂಲಕ ಸಿಕ್ಕ ಖಚಿತ ಮಾಹಿತಿಯಂತೆ ಶನಿವಾರ ಮಧ್ಯಾಹ್ನ ಸಿಡಿಪಿಒ ಶರಣಬಸಪ್ಪ ನೇತೃತ್ವದ ಅಧಿಕಾರಿಗಳ ತಂಡ ಬಾಲಕಿಯ ಮನೆಗೆ ಭೇಟಿ ನೀಡಿ, ವಿವಾಹ ನಡೆಸದಂತೆ ಮನವೊಲಿಕೆ ಮಾಡುವ ಜತೆಗೆ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಪಟ್ಟಣದ ಕಾಲವಾರಬೇಸ್ ಬಡಾವಣೆಯ ನಿವಾಸಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗ್ರಾಮವೊಂದಕ್ಕೆ ಭಾನುವಾರ ಮದುವೆ ಮಾಡಿ ಕೊಡುತ್ತಿರುವುದಾಗಿ 1098 ಮೂಲಕ ದೂರು ಬಂದಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತಂದೆ-ತಾಯಿ ಮತ್ತು ಪೋಷಕರ ಮನವೊಲಿಸಿದ್ದು, ಸದ್ಯ ಯಾದಗಿರಿ ನಗರದ ಬಾಲಕಿಯರ ಬಾಲ ಮಂದಿರದಲ್ಲಿ ಬಾಲಕಿಗೆ ಸಂರಕ್ಷಣೆ ಒದಗಿಸಿದ್ದೇವೆ ಎಂದು ಸಿಡಿಪಿಒ ಶರಣಬಸಪ್ಪ ಬೆಳಗುಂದಿ ಮಾಹಿತಿ ನೀಡಿದರು,
ತಂಡದಲ್ಲಿ ಇಸಿಒ ಪ್ರಕಾಶ ವೀರಾ ಶಾಸ್ತ್ರಿ, ಡಿಸಿಪಿಒ ದೇವಪ್ಪ, ಸಿಡಿಪಿಒ ಮೇಲ್ವಿಚಾರಕಿ ಶರಣಮ್ಮ, ಮುಖ್ಯಶಿಕ್ಷಕಿ ಜಮುನಾಬಾಯಿ, ಪೊಲೀಸ್ ಇಲಾಖೆಯ ದುರುಗಪ್ಪ, ಶ್ರಿದೇವಿ, ಸಾಹೇಬರೆಡ್ಡಿ, ಮಕ್ಕಳ ಸಹಾಯವಾಣಿಯ ಶರಬಯ್ಯ ಕಲಾಲ್, ದಿಸಿಪಿಯು ಸಾಬಯ್ಯ ಉಪಸ್ಥಿತರಿದ್ದರು.