ಯಾದಗಿರಿ: ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಬಿಡುತ್ತಿರುವುದರಿಂದ ಇದರಿಂದ ಸೇತುವೆ ತುಂಬಿ ಹರಿಯುತ್ತಿದ್ದು, ನೀರು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಕಳೆದ ಮೂರು ದಿನದ ಹಿಂದೆ ಖಾಲಿ ಇದ್ದ ನದಿಗೆ ಏಕಾಏಕಿ ನೀರು ಬಂದ ಹಿನ್ನೆಲೆಯಲ್ಲಿ ಈ ಸ್ಥಳವೀಗ ಅಕ್ಷರಶಃ ಆಕರ್ಷಣಿಯ ಕೇಂದ್ರವಾಗಿ ಕಾಣುತ್ತಿದೆ. ನಗರದ ಶಾಲಾ–ಕಾಲೇಜು ವಿದ್ಯಾರ್ಥಿಗಳು ತುಂಬಿದ ಸೇತುವೆ ನೋಡಲು ಧಾವಿಸುತ್ತಿದ್ದಾರೆ.
ಶಹಾಪುರ ಮಾರ್ಗದಲ್ಲಿ ತೆರಳುವ ಬೈಕ್, ಟಂಟಂ ಸವಾರರು ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಗುಂಪು ಗುಂಪಾಗಿ ಬರುವ ಜನರು ಸಹ ಫೋಟೊಗೆ ಪೋಸ್ ನೀಡಿ ಸಂಭ್ರಮಿಸಿದರು.
ಮೈದುಂಬಿ ಹರಿಯುತ್ತಿರುವ ಭೀಮಾ ನದಿಯನ್ನು ಕಾಣಲು ನಗರದ ಸಾರ್ವಜನಿಕರು ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.