ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಕಳೆದ ಎರಡ್ಮೂರು ದಿನಗಳಿಂದ ಬೆಳಗಿನ ಜಾವ ಚಳಿ ಹೆಚ್ಚಾಗಿದ್ದರಿಂದ ವಾಯುವಿಹಾರಕ್ಕೆ ಹೊರಡುವವರು ಹಿಂದೇಟು ಹಾಕುತ್ತಿದ್ದಾರೆ.
ನಗರದ ಅಲ್ಲಲ್ಲಿ ಬೆಳಿಗ್ಗೆ 5 ಗಂಟೆಗೆ ಬೆಂಕಿಯಿಂದ ಮೈ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿ ಕಾಣ ಸಿಗುತ್ತದೆ. ಬುಧವಾರ ಸ್ಪಲ್ಪ ಮಟ್ಟಿಗೆ ಬಿಸಿಲಿನ ವಾತಾವರಣ ಇತ್ತು. ಆದರೆ, ಗುರುವಾರ ಮೋಡಕವಿದ ವಾತಾವರಣ ಇತ್ತು.
ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ, ಕಾಕಲವಾರ, ಗಾಜರಕೋಟ, ನಜರಾಪುರ, ಪುಟಪಾಕ, ಚಂಡರಕಿ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. 10 ನಿಮಿಷಗಳ ಹಾಕಿ ಅಲ್ಪ ಪ್ರಮಾಣದಲ್ಲಿ ಮಳೆ ಸಿಂಚನವಾಗಿದೆ.
ಸುರಪುರ, ಹುಣಸಗಿ, ಕಕ್ಕೇರಾ, ಸೈದಾಪುರ ಹೋಬಳಿ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಚಳಿ ಇದೆ. ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಇತ್ತು. ಚಳಿಗಾಲದ ಆರಂಭದಲ್ಲಿಯೇ ಚಳಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ದೀಪಾವಳಿ ನಂತರ ಚಳಿ ಹೆಚ್ಚಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಗರಿಷ್ಠ 31, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ಸ್ ಬಿಸಿಲಿನ ವಾತಾವರಣ ಇದ್ದು, ಆರ್ದ್ರತೆ ಶೇ 70ರಷ್ಟಿದೆ. ಶೇ 2ರಷ್ಟು ಮಳೆ ಮುನ್ಸೂಚನೆ ಇದ್ದು, ಗಂಟೆಗೆ 16 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.