ಸುರಪುರ: ‘ಜನಪದ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಹೊಂದಿದೆ. ಜನಪದ ಎಲ್ಲ ಸಾಹಿತ್ಯಗಳ ತಾಯಿಬೇರು ಇದ್ದಂತೆ’ ಎಂದು ಉಪನ್ಯಾಸಕ ಡಾ.ಚಿ.ಸಿ.ಲಿಂಗಣ್ಣ ಹೇಳಿದರು.
ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ 80ನೇ ನಾಡಹಬ್ಬ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಮಂಗಳವಾರ ‘ಜನಪದರಲ್ಲಿ ಜೀವನಮೌಲ್ಯ’ ಕುರಿತು ಅವರು ಮಾತನಾಡಿದರು.
ಜನಪದರು ಸತ್ಯವಂತರು ಮತ್ತು ಪ್ರಾಮಾಣಿಕರು. ಅವರಲ್ಲಿ ಹಾಸು ಹೊಕ್ಕಾಗಿರುವ ತ್ಯಾಗ, ಪ್ರೀತಿ, ವಿಶ್ವಾಸ, ಬಿಗುಮಾನಗಳಿಲ್ಲದ ಅಂತಃಕರುಣೆಯ ಗುಣಗಳು ಅನುಕರಣೀಯ. ಎಲ್ಲರೊಂದಿಗೆ ಬೆರೆಯವ ಮಾನವ ಪ್ರೇಮ, ಜಾತ್ಯತೀತ ಮನೋಭಾವ, ಕರುಳು ಬಳ್ಳಿ ಸಂಬಂಧಗಳ ಬಗ್ಗೆ ಅವರಲ್ಲಿರುವ ಕಾಳಜಿ ಅನನ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ. ನಾಯಕ ಮಾತನಾಡಿ, ಇಲ್ಲಿಯ ಹಿರಿಯರು ನಾಡಹಬ್ಬ ಆಚರಣೆ ಮೂಲಕ ಉತ್ತಮ ಸಂಸ್ಕೃತಿಯನ್ನು ಬಿತ್ತಿಹೋಗಿದ್ದಾರೆ. ಇದು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಕನ್ನಡ ಸುಲಿದ ಬಾಳೆ ಹಣ್ಣಿನಷ್ಟು ಸರಳ. ಕನ್ನಡದಲ್ಲಿ ಹಾಸ್ಯ ಸಿಕ್ಕಷ್ಟು ಇತರೆ ಭಾಷೆಗಳಲ್ಲಿ ದೊರಕುವುದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಮಾತೃಭಾಷೆ ಉಳಿಸಿ ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಸೂಗೂರೇಶ ವಾರದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಶಾಂತಪ್ಪ ಬೂದಿಹಾಳ ಇದ್ದರು. ಉಪಾಧ್ಯಕ್ಷ ಶರಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಅಲಬನೂರ ರೂಪಿಸಿದರು. ವೆಂಕಣ್ಣ ಗದ್ವಾಲ ವಂದಿಸಿದರು.
ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.