ಶಹಾಪುರ: ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಂಗಳವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆಗಳ ಅಹವಾಲು ಸ್ವೀಕರಿಸಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 24 ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದ 12 ಅರ್ಜಿ, ನಗರಸಭೆ 6, ಶಿಕ್ಷಣ ಇಲಾಖೆ 2, ತಾ.ಪಂ. 2, ಲೀಡ್ ಬ್ಯಾಂಕ್ 1, ಜವಾಹರ ನವೋದಯ ವಿದ್ಯಾಲಯದ 1 ಅರ್ಜಿ ಬಂದಿದೆ. ಇವುಗಳನ್ನು ಪರಿಶೀಲಿಸಿ ಕ್ರಮ ವಹಿಸುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮತದಾನ ಚೀಟಿಗೆ ಆಧಾರ ಜೋಡಣೆ ಕುರಿತು ಈಗಾಗಲೇ ಶೇ 66ರಷ್ಟು ಆಧಾರ್ ಜೋಡಣೆ ಕಾರ್ಯ ಮುಗಿದಿದೆ. ಜಿಲ್ಲೆಯಲ್ಲಿ ಗುಳೆ ಹೋಗುವರ ಸಂಖ್ಯೆ ಹೆಚ್ಚಿರುವುದರಿಂದ ಕಾರಣಾಂತರಗಳಿಂದ ಪ್ರಗತಿ ಕುಂಠಿತಗೊಂಡಿದೆ. ಇನ್ನೂ ಕೆಲ ದಿನಗಳಲ್ಲಿ ಸಂಪೂರ್ಣವಾಗಿ ಜೋಡಣೆ ಕಾರ್ಯ ಮುಗಿಯಲಿದೆ. ಶಹಾಪುರ ಮತ್ತು ವಡಗೇರಾ ತಾಲ್ಲೂಕಿನಲ್ಲಿ ಸುಮಾರು 6 ಸಾವಿರ ಕ್ವಿಂಟಲ್ ಶೇಂಗಾ ಬೀಜದ ಬೇಡಿಕೆಯಿದೆ. ಇನ್ನೂ 2-3 ದಿನಗಳಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಕೃಷಿ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಬೀದಿ ದೀಪಗಳಿಲ್ಲದೆ ಸಾರ್ವಜನಿಕರು ಕತ್ತಲಲ್ಲಿ ಅಲೆದಾಡುವಂತೆ ಇದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿಯಲ್ಲಿ ಹೂಳು ತುಂಬಿದ್ದು, ರಸ್ತೆ ತುಂಬೆಲ್ಲ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಫಾಗಿಂಗ್ ಮಾಡುವಂತೆ ನಗರಸಭೆಯ ಸಿಬ್ಬಂದಿಗೆ ಸೂಚಿಸುವೆ ಎಂದರು.
ತಹಶೀಲ್ದಾರ್ ಮಧುರಾಜ ಕೂಡ್ಲಗಿ, ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ, ಟಿಎಚ್ಒ ಡಾ.ರಮೇಶ ಗುತ್ತೇದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುರಾಜ ಇದ್ದರು. ಸಾರ್ವಜನಿಕರು ಹಾಗೂ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿನಿಯರು ಸಮಸ್ಯೆಗಳ ಪರಿಹಾರಕ್ಕೆ ಅಹವಾಲು ಸಲ್ಲಿಸಿದರು.