ಶಹಾಪುರ: ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ವಾರ್ಡ್ ನಂ.2ರಲ್ಲಿ ಬರುವ ಪರಿಶಿಷ್ಟ ಜಾತಿಯ ಕಾಲೊನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಸರಿಯಾದ ನೀರಿನ ನಿರ್ವಹಣೆ ಇಲ್ಲದೆ ಅಲ್ಲಿನ ನಿವಾಸಗರು ಪರದಾಡುವಂತೆ ಆಗಿದೆ.
ವಾರ್ಡ್ ನಂ.2ರಲ್ಲಿ ಸುಮಾರು 480 ಜನಸಂಖ್ಯೆ ಇದೆ. ಪದೇ ಪದೇ ಪೈಪ್ ಒಡೆಯುವುದು, ಸಮರ್ಪಕವಾಗಿ ನೀರು ಬಿಡದೆ ಇರುವುದು, ಬೇಕಾಬಿಟ್ಟಿಯಾಗಿ ಅಲ್ಪಸ್ಪಲ್ಪ ನೀರು ನೀರು ಬಿಟ್ಟಾಗ ಜಗಳ ಅಡುವುದು ಸಾಮಾನ್ಯವಾಗಿದೆ ಎಂದು ಬಡಾವಣೆಯ ನಿವಾಸಿ ಶರಣುರಡ್ಡಿ ಆರೋಪಿಸಿದರು.
ಗ್ರಾಮದಲ್ಲಿ ಸವಳು ನೀರು ಇರುವುದರಿಂದ ಹೆಚ್ಚಿನ ಜನತೆ ನಲ್ಲಿಯ ನೀರು ಅವಲಂಬಿಸಿದ್ದಾರೆ. ತಾಲ್ಲೂಕಿನ ವಿಬೂತಿಹಳ್ಳಿಯ ಬಳಿ ಕಿರು ನೀರು ಸರಬರಾಜು ಕೇಂದ್ರದಿಂದ ಸರಬರಾಜು ಮಾಡುತ್ತಾರೆ. ಆದರೆ ನಿರ್ವಹಣೆಯ ಕೊರತೆಯಿಂದ ಸಮಸ್ಯೆ ಬಿಗಡಾಯಿಸಿದೆ. ಸಾಕಷ್ಟು ಬಾರಿ ಪಿಡಿಒ ಅವರಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. 3 ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಪ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನೀರಿನ ಬವಣೆ ಎದುರಿಸುತ್ತಿರುವ ಅಲ್ಲಿನ ನಿವಾಸಿಗರು ಎಚ್ಚರಿಕೆ ನೀಡಿದ್ದಾರೆ.