ಕದರಾಪುರ (ವಡಗೇರಾ): ತಾಲ್ಲೂಕಿನ ಕದರಾಪುರ ಗ್ರಾಮದ ಚಂದ್ರಶೇಖರ ರುದ್ರಗೌಡ ಎಂಬುವವರ ಹೊಲದಲ್ಲಿ ಮಂಗಳವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹೊಲದಲ್ಲಿ ಶೇಖರಿಸಿ ಇಟ್ಟಿದ್ದ ಸುಮಾರು 40 ಕ್ವಿಂಟಲ್ ಹತ್ತಿ ಸುಟ್ಟು ಹೋಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರು. ಆದರೆ, ಬೆಂಕಿ ಹೆಚ್ಚಾಗಿದ್ದರಿಂದ ಸಂಪೂರ್ಣ ಹತ್ತಿ ಸುಟ್ಟಿದೆ.
ಬರಗಾಲದ ಸಮಯದಲ್ಲಿ ಸಾಲ ಮಾಡಿ ಬೆಳೆದಿದ್ದ ಸುಮಾರು₹2 ಲಕ್ಷ ಮೌಲ್ಯದ ಹತ್ತಿ ಈಗ ಬೆಂಕಿಗೆ ಆಹುತಿಯಾಗಿದ್ದು, ಭಾರಿ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಚಂದ್ರಶೇಖರ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಗುರುವಾರ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ವಡಗೇರಾ ಪೊಲೀಸ್ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.