ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ಸೋಮವಾರ (ಆ.21) ರಂದು ವಾಂತಿ ಭೇದಿ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ (ಆ.22) ಮಧ್ಯಾಹ್ನದ ವೇಳೆಗೆ 19 ಜನರು ಅಸ್ವಸ್ಥರಾಗಿದ್ದಾರೆ.
‘ಈವರೆಗೆ ಒಟ್ಟು 19 ಪ್ರಕರಣಗಳು ಕಂಡುಬಂದಿದ್ದು, 9 ಜನರಲ್ಲಿ ಮಾತ್ರ ವಾಂತಿ ಭೇದಿ ಸಮಸ್ಯೆಯಿದೆ. ಉಳಿದವರಲ್ಲಿ ಕೇವಲ ಭೇದಿ ಸಮಸ್ಯೆಯಿದೆ’ ಎಂದು ಗಾಜರಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಎಂ.ಎಂ.ರಾಹಿಲ್ ತಿಳಿಸಿದರು.
ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ 5 ಜನರನ್ನು ಕಳುಹಿಸಲಾಗಿದ್ದು, ವೈದ್ಯಕೀಯ ಆರೈಕೆ ಪಡೆದು ಗುಣಮುಖರಾಗಿದ್ದಾರೆ. ವಯಸ್ಸಾದ ಒಬ್ಬರಲ್ಲಿ ಕಡಿಮೆ ರಕ್ತದೋತ್ತಡವೂ ಕಾಣಿಸಿಕೊಂಡ ಹಿನ್ನಲೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
‘ಗಾಜರಕೋಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಐವರು ವೈದ್ಯಕೀಯ ಆರೈಕೆ ಪಡೆಯುತ್ತಿದ್ದು, 4 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಈ ಮೊದಲು ಫೆಬ್ರುವರಿ ತಿಂಗಳಲ್ಲಿ ಅನಪುರ ಗ್ರಾಮದ ಮೂವರು ವಾಂತಿ ಭೇದಿಗೆ ಮೃತಪಟ್ಟ ನಂತರವೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸದಿರುವುದು ಆಶ್ಚರ್ಯಕರ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು.