ಸುರಪುರ: ‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಲು ಇಂಗ್ಲಿಷ್ ಕಲಿಕೆ ಅಗತ್ಯ’ ಎಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಸೈದಾಬಿ ಜಮಾದಾರ ಹೇಳಿದರು.
ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ ‘ವಿಶ್ವಾಸ ಕಿರಣ’ ಇಂಗ್ಲಿಷ್ ಕಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ವಿಶ್ವಾಸವಿಟ್ಟು ಕಲಿತರೆ ಅದು ಸುಲಭ ಸಾಧ್ಯ. ಇಂಗ್ಲಿಷ್ ಕಲಿತರೆ ಕೀಳರಿಮೆ ಹೋಗುತ್ತದೆ. ವಿಶ್ವದ ಯಾವುದೇ ದೇಶದ ಜನರೊಡನೆ ವ್ಯವಹರಿಸಲು ಸಾಧ್ಯವಾಗುತ್ತದೆ’ ಎಂದರು.
‘ಮಾಹಿತಿ ಮತ್ತು ತಂತ್ರಜ್ಞಾನ ಬೆಳೆದಂತೆ ಇಂಗ್ಲಿಷ್ ಕಡ್ಡಾಯವಾಗುತ್ತಿದೆ. ಅನೇಕ ವಿದೇಶಿ ಕಂಪನಿಗಳು ದಾಂಗುಡಿ ಇಡುತ್ತಿವೆ. ಅಂತಹ ಕಂಪನಿಗಳಲ್ಲಿ ಕೆಲಸ ಮಾಡಲಿ ಇಂಗ್ಲಿಷ್ ಬೇಕೆ ಬೇಕು’ ಎಂದು ಹೇಳಿದರು.
‘ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಕಲಿಕೆಯ ಬಗ್ಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಉಪನ್ಯಾಸಕರಾದ ಬಸವರಾಜ ಭೋಸಗಿ, ಫಾತಿಮಾ, ಪೂಜಾ ಠಾಕೂರ್, ಸುರೇಶ, ವಿದ್ಯಾರ್ಥಿನಿಯರು ಇದ್ದರು.