ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಲಾರಲಿಂಗೇಶ್ವರ ಜಾತ್ರೆ: ಮೈಲಾಪುರದ ಗುಹಾಂತರ ದೇವಾಲಯ ವೈಭವ

Published 14 ಜನವರಿ 2024, 6:29 IST
Last Updated 14 ಜನವರಿ 2024, 6:29 IST
ಅಕ್ಷರ ಗಾತ್ರ

ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಭಕ್ತರು ತಂಡೋಪತಂಡವಾಗಿ ತೆರಳುತ್ತಿದ್ದಾರೆ.

ಸಂಕ್ರಾಂತಿ ಅಂಗವಾಗಿ ಪ್ರತಿ ವರ್ಷ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಈ ಬಾರಿ ಜನವರಿ 12ರಿಂದ 17ವರೆಗೆ ಜಾತ್ರಾ ಮಹೋತ್ಸವವಿದೆ.

ಜನವರಿ ತಿಂಗಳ ಆರಂಭದಿಂದಲೇ ಜಾತ್ರೆ ಸಡಗರ ಆರಂಭವಾಗಿದ್ದು, ವಿವಿಧ ಅಂಗಡಿ ಮುಂಗಟ್ಟುಗಳು ಬೀಡುಬಿಟ್ಟಿವೆ. ಪೂಜಾ ಸಾಮಾಗ್ರಿ, ಬೆಂಡು ಬತ್ತಾಸು, ಕಬ್ಬಿನ ಹಾಲಿನ ಅಂಗಡಿಗಳು ಹಾಕಲು ಸಿದ್ಧತೆ ಮಾಡಿಕೊಂಡಿವೆ.

ಜಿಲ್ಲೆಯ ‘ಎ’ ಗ್ರೇಡ್‌ ಸ್ಥಾನಮಾನ ಹೊಂದಿರುವ ಮೈಲಾಪುರ ದೇಗುಲ, ನೈಸರ್ಗಿಕವಾಗಿ ಬೆಳೆದ ಬೆಟ್ಟ ಗುಡ್ಡಗಳಲ್ಲಿ ತಲೆ ಎತ್ತಿ ನಿಂತಿದೆ. ಮೈಲಾರಲಿಂಗೇಶ್ವ ಜಾತ್ರೆಯ ದಿನಗಳಂದು ದೇವರ ಪಲ್ಲಕ್ಕಿಗೆ ಕುರಿಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ.

ಪೊಲೀಸ್‌ ಬಂದೋಬಸ್ತ್‌: ಜಾತ್ರೆಯ ಅಂಗವಾಗಿ ಪೊಲೀಸ್‌ ಇಲಾಖೆಯಿಂದ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. 400ಕ್ಕೂ ಹೆಚ್ಚು ಹೋಂ ಗಾರ್ಡ್‌, 3 ಡಿವೈಎಸ್‌ಪಿ, 7 ಸಿಪಿಐ, 37 ಪಿಎಸ್‌ಐ, 71 ಎಎಸ್‌ಐ, 112 ಹೆಡ್‌ ಕಾನ್‌ಸ್ಟೆಬಲ್‌, 253 ಪಿಸಿ, 124 ಮಹಿಳಾ ಪಿಸಿ, ಡಿಎಆರ್‌ 3, 2 ಕೆಎಸ್‌ಆರ್‌ಪಿ ತುಕಡಿ ಪೊಲೀಸ್‌ ಸಿಬ್ಬಂದಿ ನೇಮಕ ಮಾಡಲಾಗಿದೆ. ಮೈಲಾಪುರ ಗ್ರಾಮ ಸಂಪರ್ಕಿಸುವ ಆರು ಕಡೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಪಾದಯಾತ್ರೆಯಲ್ಲಿ ಭಕ್ತರು: ಮೈಲಾರಲಿಂಗೇಶ್ವರ ಜಾತ್ರೆಗಾಗಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಇನ್ನೂ ಕೆಲವರು ಬೈಕ್, ಕಾರು, ಟಂಟಂ ಮೂಲಕ ಭಕ್ತರು ಬರುತ್ತಿದ್ದಾರೆ.

ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗ
ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗ
ಯಾದಗಿರಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯ
ಯಾದಗಿರಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯ
ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ಮಲ್ಲಯ್ಯನ ಭಕ್ತರು ಮೈಲಾರಲಿಂಗೇಶ್ವರ ಜಾನಪದ ಗೀತೆ ಹಾಡಿದರು
ಮಲ್ಲಯ್ಯನ ಭಕ್ತರು ಮೈಲಾರಲಿಂಗೇಶ್ವರ ಜಾನಪದ ಗೀತೆ ಹಾಡಿದರು
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಗೆ ರಾಜ್ಯವಲ್ಲದೇ ಆಂಧ್ರ ತೆಲಂಗಾಣ ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಿದ್ದು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ
ಸುರೇಶ ಅಂಕಲಗಿ ಯಾದಗಿರಿ ತಹಶೀಲ್ದಾರ್‌
ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮಂಚ ಇರುವುದರಿಂದ ಗ್ರಾಮದ ಯಾರ ಮನೆಯಲ್ಲೂ ಇಲ್ಲ. ಅಲ್ಲದೇ ಕೋಳಿಯೂ ಇಲ್ಲ. ಇದೊಂದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. 
ಸುಭಾಷ ಹೆಡಗಿಮನಿ ದೇವಸ್ಥಾನ ಆರ್ಚಕ
ಮಲ್ಲಯ್ಯನ ಪಲ್ಲಕ್ಕಿ ಉತ್ಸವ ಇಂದು
ಜ.14ರಂದು ಮಕರ ಸಂಕ್ರಮಣ ದಿನ ಮಲ್ಲಯ್ಯನ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ತೆಲಂಗಾಣ ಆಂಧ್ರಪ್ರದೇಶ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಮಲ್ಲಯ್ಯನ ಜಾತ್ರೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಶನಿವಾರ ರಾತ್ರಿ 11ರಿಂದ ಬೆಳಿಗ್ಗೆ 5ರ ವರೆಗೆ ಮೈಲಾರಲಿಂಗೇಶ್ವರ ಮಹಾಪೂಜೆ ರುದ್ರಾಭಿಷೇಕ ದೂಳಗಾಲಿನಲ್ಲಿ ನಡೆಯಿತು. ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ1.57 ರವರೆಗೆ ಪುಣ್ಯ ಕಾಲ ಇರುವುದರಿಂದ ಮಧ್ಯಾಹ್ನ 12:30 ಕ್ಕೆ ಗಂಗಾಸ್ನಾನ 2 ಗಂಟೆ 5 ನಿಮಿಷದಿಂದ 3 ಗಂಟೆ ಒಳಗೆ ಸರಪಳಿ ಹರಿಯುವಿಕೆ ನಂತರ ಗುಡಿಯ ಸುತ್ತಲೂ ಪಲ್ಲಕ್ಕಿ ಸೇವೆ ನಡೆಯಲಿದೆ. ಸಂಜೆ 6.30ಕ್ಕೆ ಭಕ್ತರಿಂದ ತುಪ್ಪದಗುಡ್ಡಕ್ಕೆ ತುಪ್ಪ ಮತ್ತು ಎಣ್ಣೆ ದೀಪ ಹಚ್ಚುವುದು. ರಾತ್ರಿ 10.45 ರಿಂದ 11:45 ರವರೆಗೆ ಮೈಲಾರಲಿಂಗೇಶ್ವರ ಗಂಗಿ ಮಾಳಮ್ಮರ ವಿವಾಹ ನಡೆಯಲಿದೆ. ಜನವರಿ 21ರ ರಾತ್ರಿ 10.30 ಕ್ಕೆ ನಾಗೋಲಿ ಚಾಗೋಲಿ ಕಾರ್ಯಕ್ರಮ ನಡೆಯಲಿದೆ. ವಿಶೇಷ ದರ್ಶನಕ್ಕಾಗಿ ರೂ.300 ಶುಲ್ಕವನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಜಾತ್ರೆ ಮುಗಿದ ನಂತರ 5 ಸೋಮವಾರಗಳಂದು ರಾತ್ರಿ 9 ಗಂಟೆಗೆ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮರ ಮೆರವಣಿಗೆ ಜರುಗಲಿದೆ.
ಕೋಳಿ ಕೂಗದ ಮಂಚ ಇಲ್ಲದ ಮೈಲಾಪುರ
ಮೈಲಾರಲಿಂಗೇಶ್ವರ ದೇವಸ್ಥಾನ ಇರುವ ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ  ಕೋಳಿ ಕೂಗುವ ಶಬ್ದ ಕೇಳಿಸುವುದಿಲ್ಲ. ಅಲ್ಲದೇ ಗ್ರಾಮದ ಯಾವುದೇ ಮನೆಯಲ್ಲಿ ಮಂಚವೂ ಇಲ್ಲ. ಇದು ಈ ಊರಿನ ವಿಶೇಷವಾಗಿದೆ. ಅರಕೇರಾ (ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಮೈಲಾಪುರ ಗ್ರಾಮವಾಗಿದೆ. ‘ಮೈಲಾರಲಿಂಗೇಶ್ವರ ದೇವರಿಗೆ ಕೋಳಿ ಕೂಗುವ ಶಬ್ದ ಕೇಳಬಾರದು. ದೇವಸ್ಥಾನದಲ್ಲಿ ಮರದ ಮಂಚ ಗಾದಿ ಇರುವುದರಿಂದ ಗ್ರಾಮದಲ್ಲಿ ಯಾರೊಬ್ಬರೂ ಮಂಚ ಬಳಸುವುದಿಲ್ಲ. ಕೋಳಿ ಸಾಕಾಣಿಯೂ ಇಲ್ಲ. ಶತಮಾನಗಳಿಂದಲೂ ಈ ಪದ್ಧತಿಯನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು. ವಿವಾಹ ಮಾಡಿ ಮಗಳನ್ನು ಗಂಡನ ಮನೆಗೆ ಕಳಿಸುವಾಗ ತವರಿನವರು ಮಂಚ ಸೇರಿ ಅಗತ್ಯ ಮನೆಬಳಕೆ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ರೂಢಿ. ಆದರೆ ಈ ಊರಿಗೆ ಮದುವೆಯಾಗಿ ಬರುವವರಿಗೆ ಮತ್ತು ಬೇರೆಡೆ ಹೋಗುವವರಿಗೆ ಮಂಚವನ್ನು ಉಡುಗೊರೆಯಾಗಿ ಕೊಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT