ಮುನಗಾಲ (ಸೈದಾಪುರ): ’ಗ್ರಾಮದ ಅಭಿವೃದ್ಧಿಯು ಆ ಗ್ರಾಮದ ಶಾಲೆಗಳ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಶಾಲೆಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ನೂತನ ತಂತ್ರಜ್ಞಾನದ ಬಳಕೆ ಅತ್ಯವಶ್ಯಕವಾಗಿದೆ‘ ಎಂದು ನ್ಯಾಯವಾದಿ ಮಹಿಪಾಲರೆಡ್ಡಿ ಅಭಿಪ್ರಾಯಪಟ್ಟರು.
ಸಮೀಪದ ಮುನಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ಕ್ಲಾಸ್ ಉಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ನಮ್ಮ ಗ್ರಾಮದ ಮಕ್ಕಳು ಯಾವುದೇ ಶಿಕ್ಷಣ ಸೌಲಭ್ಯದಿಂದ ವಂಚಿತರಾಗದೆ ಇತರ ಪ್ರದೇಶದ ಮಕ್ಕಳಂತೆ ನೂತನ ತಂತ್ರಜ್ಞಾನದ ಶಿಕ್ಷಣ ಪದ್ಧತಿಯ ಸೌಲಭ್ಯವನ್ನು ಉಪಯೋಗಿಸಿಕೊಂಡು ನಮ್ಮ ಮಕ್ಕಳು ಉತ್ತಮ ಸಾಧನೆ ಮಾಡಬೇಕು. ಗ್ರಾಮಸ್ಥರು ಶಾಲೆಗಳನ್ನು ನಮ್ಮೂರಿನ ಆಸ್ತಿಯಾಗಿ ನೋಡಿಕೊಳ್ಳುವ ಮನೋಭವನೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.
ಇದರಿಂದಾಗಿ ಗ್ರಾಮದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾದ್ಯವಾಗುತ್ತದೆ. ಹಾಗೂ ಶಾಲೆಗೆ ನೀಡದ ಕಲಿಕಾ ಉಪಕರಣಗಳನ್ನು ಶಿಕ್ಷಕರು ಉತ್ತಮವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಇದನ್ನು ಶಿಕ್ಷಕ ಸಮುದಾಯವು ಅರಿತುಕೊಂಡು ನಮ್ಮ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸವುದಕ್ಕೆ ಪ್ರಾಮಾಣಿಕ ಪ್ರಯತ್ನ ಅವಶ್ಯಕವಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಮುಖ್ಯಗುರು ಯಾಸ್ಮೀನ್ ಕತೀಬ್, ’ಗ್ರಾಮಸ್ಥರು ಕೂಡಿಕೊಂಡು ಸರ್ಕಾರಿ ಶಾಲೆಗೆ ಅವಶ್ಯಕವಾದ ಕಲಿಕಾ ಉಪಕರಣಗಳನ್ನು ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ. ಇದರಿಂದಾಗಿ ಈ ಕಾಲದ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಕ್ಕಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನುಂಟು ಮಾಡಲು ಸಹಾಯಕವಾಗುತ್ತದೆ‘ ಎಂದು ತಿಳಿಸಿದರು.
ಇದಕ್ಕೂ ಮುಂಚಿತವಾಗಿ ಗ್ರಾಪಂ ಸದಸ್ಯರಾದ ಭೀರಪ್ಪ ಮತ್ತು ಹಣಮಂತ ದುಬೈ ನೋಟ್ ಬುಕ್, ಪೆನ್ಗಳನ್ನು ಮಕ್ಕಳಿಗೆ ವಿತರಿಸಿದರು.
ಶಾಲೆ ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಕುಂಬಾರ, ನಾಗರೆಡ್ಡಿಗೌಡ ಬಿರಾದರ, ಭೀಮಶಪ್ಪ, ಯಲ್ಲಪ್ಪ, ಮಲ್ಲಿಕಾರ್ಜುನ ಬಾಡದ್, ಭೀಮರಾಯ, ಮುಖ್ಯಗುರು ಯಾಸ್ಮೀನ್ ಕತೀಬ್, ಗಿರೀಶ, ಸುಜಾತ, ಮಮತಾ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.