ಗುರುಮಠಕಲ್: ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಾಗೂ ಅನಿಲ ಭಾಗ್ಯ ಯೋಜನೆಯಲ್ಲಿ ನೀಡುತ್ತಿರುವ ಎಲ್.ಪಿ.ಜಿ. ಸಿಲಿಂಡರ್ ಕಿಟ್ನ್ನು ವ್ಯವಸ್ಥಿತವಾಗಿ ವಿತರಣೆ ಮಾಡಬೇಕು’ ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಗದ್ದಿಗಿ ಆಗ್ರಹಿಸಿದರು.
ತಾಲ್ಲೂಕಿನ ಎಲ್ಹೇರಿ ಗ್ರಾಮದಲ್ಲಿ ಗುರುವಾರ ಶ್ರೀಲಕ್ಷ್ಮೀ ವೆಂಕಟೇಶ್ವರ ಗ್ಯಾಸ್ ಏಜೆನ್ಸಿ ಕೇಂದ್ರದಲ್ಲಿ ಕಿಟ್ ವಿತರಣೆಗೆ ಸಮಸ್ಯೆಯಾಗುತ್ತಿರುವ ಕುರಿತು ಉಪತಹಶೀಲ್ದಾರ್ ಬಸವರಾಜ ಸಜ್ಜನ್ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು, ದಿನಕ್ಕಿಷ್ಟು ಜನತೆಗೆ ಟೋಕೆನ್ ಮೂಲಕ ಕಿಟ್ ವಿತರಣೆ ಮಾಡಿದರೆ ಸಮಸ್ಯೆಯಾಗದು ಎಂದರು.
ಸಾಮಾನ್ಯವಾಗಿ ಬಡ ಜನತೆಗೆ ಉಚಿತ ಸಿಲಿಂಡರ್ ನೀಡುವುದರಿಂದ ಬಡವರೇ ಅಲೆದಾಡುತ್ತಿದ್ದಾರೆ. ಪ್ರತಿನಿತ್ಯ ಅಲೆದಾಡುವ ಕೂಲಿ ಕಾರ್ಮಿಕರಿಗೆ ನಿತ್ಯದ ಕೂಲಿಯು ಕೈತಪ್ಪುತ್ತಿದೆ. ಅದಕ್ಕೆ ಬದಲಾಗಿ ದಿನಕ್ಕೆ ಒಂದು ಗ್ರಾಮದಂತೆ ಟೋಕೆನ್ ಪಡೆದವರು ಮಾತ್ರ ಬಂದು ಪಡೆಯುತ್ತಾರೆ, ಉಳಿದವರು ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಇದರಿಂದ ಜನ ಹಾಗೂ ಏಜೆನ್ಸಿಗೂ ಸರಳವಾಗಲಿದೆ ಎಂದರು.
ಎಲ್ಹೇರಿ ಏಜೆನ್ಸಿಯಲ್ಲಿ ಉಚಿತ ಗ್ಯಾಸ್ ಕಿಟ್ ನೀಡಲು ₹600 ನೀಡಿದವರಿಗೆ ಮಾತ್ರ ಕೊಡುತ್ತಿದ್ದಾರೆ, ವಾರದಲ್ಲಿ ಒಂದು ದಿನ ಮಾತ್ರ ಏಜೆನ್ಸಿ ಬಾಗಿಲು ತೆರಯುತ್ತಾರೆ. ಉಳಿದ ದಿನಗಳಲ್ಲಿ ಮುಚ್ಚುವುದು ಮತ್ತು ಸಿಲಿಂಡರ್ ಅಕ್ರಮ ದಾಸ್ತಾನು ಮಾಡಿಕೊಂಡು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವ ಆರೋಪವಿದೆ. ಜನರಿಂದ ಸುಲಿಗೆ ಮತ್ತು ಸಮಸ್ಯೆ ಉಂಟುಮಾಡುವ ಏಜೆನ್ಸಿ ವಿರುದ್ಧ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಸಮಸ್ಯೆಯಾಗದಂತೆ ಗ್ಯಾಸ್ ವಿತರಣೆ, ಸರ್ಕಾರದ ಉಚಿತ ಕಿಟ್ನ್ನು ಹಣ ಪಡೆಯದೇ ನೀಡಬೇಕು ಇಲ್ಲವಾದರೆ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.
ಉಪತಹಶೀಲ್ದಾರ್ ವಸವರಾಜ ಸಜ್ಜನ, ಆಹಾರ ನಿರೀಕ್ಷಕ ಅನ್ವರ, ಪಿ.ಎಸ್.ಐ ಹೇಮಾವತಿ ಮುಖಾಂತರ ಫಲಾನುಭವಿಗಳಿಗೆ ಉಚಿತ ಕಿಟ್ ಹಂಚಿಕೆ ಮಾಡಲಾಯಿತು.
ಸಂಘಟನೆಯ ಗೋಪಾಲಕೃಷ್ಣ ಮೇದಾ, ನರಸಿಂಹುಲು ಗಂಗನೋಳ, ಉದಯಕುಮಾರ ವಿಶ್ವಕರ್ಮಾ, ಸುನೀಲ ಮೇದಾ, ಬಸವ ಗೋಪಾಲಪುರ, ಶ್ರೀನಿವಾಸ ಪಾಡುಪಲ್ಲಿ, ಜಗಪ್ಪ ನಕ್ಕ, ಪ್ರವೀಣಕುಮಾರ, ಬನ್ನಪ್ಪ ಮಡುಗು, ಗ್ರಾ.ಪಂ.ಉಪಾಧ್ಯಕ್ಷ ಬಸವರಾಜ ಕಣೇಕಲ್, ಸದಸ್ಯ ಭೀಮರಾಯ ಸೇರಿದಂತೆ ಫಲಾನುಭವಿಗಳು ಇದ್ದರು.