ಸುರಪುರ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಗುರುವಾರ ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ರಸ್ತೆ ತಡೆ ನಡೆಸಿದರು. ಪಾಕ್ ವಿರುದ್ಧ ಘೋಷಣೆ ಕೂಗಿದರು.
ಬಜ ರಂಗದಳದ ತಾಲ್ಲೂಕು ಸಂಯೋಜಕ ಸಚಿನಕುಮಾರ ನಾಯಕ ಮಾತನಾಡಿ, ‘ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಕೊಲೆ ಮಾಡಿದ ಉಗ್ರರು ಹೇಡಿಗಳು. ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆಗಳೊಂದಿಗೆ ನಂಟು ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ. ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಈ ಉಗ್ರರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದರು.
ರಾಮಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಶರಣುನಾಯಕ ಮಾತನಾಡಿ, ‘ಉಗ್ರರ ಅಟ್ಟಹಾಸ ಎಲ್ಲೆ ಮೀರಿದೆ. ಕೇಂದ್ರ ಸರ್ಕಾರ ಉಗ್ರರ ಮಟ್ಟ ಹಾಕಲು ವಿಶೇಷ ಪಡೆ ರಚಿಸಬೇಕು. ಉಗ್ರರು ಇನ್ನು ಮುಂದೆ ಇಂತಹ ಕೃತ್ಯ ಮಾಡಲು ಹೆದರುವಷ್ಟು ಕಠಿಣ ಕಾರ್ಯಾಚರಣೆ ನಡೆಸಬೇಕು’ ಎಂದು ಒತ್ತಾಯಿಸಿದರು.
ರಾಮಸೇನಾ ತಾಲ್ಲೂಕು ಘಟಕದ ಅಧ್ಯಕ್ಷ ಶರಣುನಾಯಕ ಡೊಣ್ಣಿಗೇರಿ ಮಾತನಾಡಿದರು.
ಗುರುನಾಥರೆಡ್ಡಿ ಶೀಲವಂತ, ಸಂದೀಪ ಜೋಷಿ, ವೆಂಕಟೇಶ ಶಾವಂತಗಿರಿ, ಅನಿಲ ಬಿಳ್ಹಾರ, ಹಂಪಯ್ಯ ಹಿರೇಮಠ, ಅಂಬ್ರೇಶ ಅಮ್ಮಾಪುರ, ಮಹಾಂತೇಶ ಇದ್ದರು.