ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಮೊಸರನ್ನ ಬಾನ ಬುತ್ತಿ

Last Updated 30 ಮೇ 2018, 11:08 IST
ಅಕ್ಷರ ಗಾತ್ರ

ಶಕ್ತಿನಗರ: ದೇವಸೂಗೂರು ಸೂಗೂರೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಮೊಸರನ್ನ ಬಾನಬುತ್ತಿಯ ಧಾರ್ಮಿಕ ಕಾರ್ಯಕ್ರಮ ಗಮನ ಸೆಳೆಯಿತು.

ಖಡಕ್ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ಅಂಬ್ರೆಕಾಳು, ಅಂಬಲಿ, ಉಳ್ಳಾಗಡ್ಡಿ ಚಟ್ನಿ, ಮೊಸರನ್ನ ಸೇರಿದಂತೆ ವಿವಿಧ ಖಾದ್ಯಗಳನ್ನು ದೇವಸ್ಥಾನಕ್ಕೆ ಬಂದ ಭಕ್ತರು ಹಾಗೂ ಸಾವಿರಾರು ಜಂಗಮರು ಸವಿದರು.

ಹಿನ್ನೆಲೆ: ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಬಸವಣ್ಣನವರು ಒಂದು ಲಕ್ಷದ ತೊಂಬತ್ತಾರು ಸಾವಿರ ಜಂಗಮರಿಗೆ ನಿತ್ಯ ಪ್ರಸಾದವನ್ನು ಮಾಡುವ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪಕ್ಕೆ ಇನ್ನೂ ಆರು ಸಾವಿರ ಜಂಗಮರು ಕಡಿಮೆಯಾಗಿದ್ದರು. ಆ ಜಂಗಮರು ಕಾಶ್ಮೀರದ ಮಹಾದೇವರಸ ಮುದ್ರೆಯ ಮನೆಯಲ್ಲಿರುವ ವಿಚಾರ ತಿಳಿಯಿತು. ಆದರೆ, ಬಸವಣ್ಣನವರು ಆರು ಸಾವಿರ ಜಂಗಮರನ್ನು ಕರೆ ತರುವ ಬಗ್ಗೆ ಚಿಂತೆಗೊಳಗಾದರು.ಆಗ ಅಲ್ಲಿಂದ ಅವರನ್ನು ಹೇಗೆ ಕರೆತರುವುದು ಎಂಬ ಯೋಚನೆಯಲ್ಲಿರುವಾಗ ಪ್ರಸಾದ ಮೂಲಕ ಕರೆತರಬೇಕು ಎನ್ನುವ ತೀರ್ಮಾನಕ್ಕೆ ಬಂದು, ಮೊಸರನ್ನ ಬಾನ ಮಾಡಿಕೊಂಡ ಅನ್ನದ ರೂಪದಲ್ಲಿ ಕರೆತರಲಾಯಿತು. ಆಗ ಸೂಗೂರೇಶ್ವರ ಸ್ವಾಮಿಯ ಜತೆಯಲ್ಲಿ ಜಂಗಮರು ಬಂದ ಪ್ರತೀಕವಾಗಿ ಮೊಸರಬಾನ ಬುತ್ತಿಯನ್ನು ಇಂದಿಗೂ ಮಾಡಿಕೊಂಡ ಬರಲಾಗುತ್ತಿದೆ.

ಸೂಗೂರೇಶ್ವರ ಸ್ವಾಮಿ ಜಂಗಮ ಸ್ವರೂಪಿಯಾಗುತ್ತಾನೆ. ದೇವರಿಗೆ ನದಿ ಸ್ಥಾನದ ನಂತರ ಮಹಾಭಿಷೇಕ ಮಾಡಲಾಗುತ್ತಿದೆ. ಕಾವಿಧಾರಣೆ ಮಾಡಿ ಜೋಳಿಗೆಯಲ್ಲಿ ಅಕ್ಕಿ ಹಾಕುವ ಮೂಲಕ ನೈವೇದ್ಯ ಮಾಡಲಾಗುತ್ತದೆ. ವಚನಕಾರರ ದಾಸೋಹ ಪದ್ಧತಿ ಆಚರಣೆ ಸಂದರ್ಭದಲ್ಲಿ ಜಂಗಮರಿಗೆ ಮೊಸರನ್ನ ಬಾನ ಬುತ್ತಿ ಉಣ ಬಡಿಸಲಾಗುತ್ತಿತ್ತು ಎನ್ನುತ್ತಾರೆ ಗ್ರಾಮದ ಮುಖಂಡ ಸಿದ್ಧಪ್ಪಗೌಡ, ಸಾಂಬಶಿವ.

‘12ನೇ ಶತಮಾನದ ಪರಂಪರೆ ಯನ್ನು ಈಗಲೂ ಈ ದೇವಾಲಯದಲ್ಲಿ ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ದೇವಸೂಗೂರು ಗ್ರಾಮದ ಸಿದ್ಧ ರಾಮಪ್ಪ ಮಾಲಿಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT