ಯರಗೋಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ತಾಲ್ಲೂಕಿನ ಕೆರೆಗಳು ಭರ್ತಿಯಾಗಿವೆ. ಗುರುವಾರವೂ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ, ಕೆಲವು ಮನೆಗಳ ಗೋಡೆಗಳು ಕುಸಿದು ಹಾನಿಯಾಗಿದೆ.
ಗ್ರಾಮದ ದೊಡ್ಡ ಕೆರೆ (202 ಹೆಕ್ಟೇರ್ ವಿಸ್ತೀರ್ಣ) ಸೇರಿ ಖಾನಳ್ಳಿ, ಚಾಮನಹಳ್ಳಿ, ಅಲ್ಲಿಪುರ, ಕಂಚಗಾರ ಹಳ್ಳಿ, ವಡ್ನಳ್ಳಿ, ಬೆಳಗೇರಾ, ಬಾಚವಾರ, ಚಾಮನಹಳ್ಳಿ ಕೆರೆಗಳು ತುಂಬಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಬಿರುಸಿನ ಮಳೆಗೆ ರೈತರು ನಷ್ಟ ಅನುಭವಿಸುವಂತಾಗಿದೆ. ಶೇಂಗಾ ಬಿತ್ತನೆಯಾಗಿದ್ದು, ಬೀಜಗಳು ಕೊಳೆಯುತ್ತಿವೆ. ಹತ್ತಿಹೊಲಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬೆಳಹಾನಿ ಯಾಗುವ ಆತಂಕ ಎದುರಾಗಿದೆ ಎಂದುಹೊನಗೇರಾ ಗ್ರಾ.ಪಂ. ಸದಸ್ಯ ಶರಣು ಎಮ್ಮೆನೊರು ಅಳಲು ತೋಡಿಕೊಂಡರು.
ಮಲ್ಕಪನಳ್ಳಿಯಲ್ಲಿ ರೈಲು ಕೆಳ ಸೇತುವೆ ಜಲಾವೃತಗೊಂಡಿದ್ದು, ಸಂಚಾರ ಕಡಿತಗೊಂಡಿದೆ. ಯಾದಗಿರಿ–ಅಬ್ಬೆತುಮಕೂರು ಮಾರ್ಗದಲ್ಲಿ ಹಳ್ಳದ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ರಸ್ತೆಗಳು ಚರಂಡಿಗಳಂತಾಗಿದ್ದು, ಸಾರ್ವ ಜನಿಕರಿಗೆ, ವಾಹನ ಸಂಚಾರಿ ಗಳಿಗೆ, ಕೃಷಿಕರಿಗೆ, ದಿನಗೂಲಿ ಕಾರ್ಮಿಕರಿಗೆ ಜಾನುವಾರುಗಳಿಗೆ ತೊಂದರೆಯಾಗಿದೆ.