ಶಹಾಪುರ: ‘ವ್ಯಕ್ತಿಯ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ವಿದ್ಯಾರ್ಥಿಗಳು ಕೇವಲ ಪಾಠದ ವಿಷಯಗಳಲ್ಲದೆ ಸಾಹಿತ್ಯ ಮತ್ತು ಪತ್ರಿಕೆಗಳನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಜ್ಞಾನ ವೃದ್ಧಿಯಾಗುತ್ತದೆ’ ಎಂದು ಹಿರಿಯ ಸಾಹಿತಿ ಎಚ್.ವಿಜಯಭಾಸ್ಕರ್ ಹೇಳಿದರು.
ನಗರದ ಶಿವಶೇಖರಪ್ಪಗೌಡ ಪಾಟೀಲ ಶಿರವಾಳ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಗುರುವಾರ ಜಾಣ-ಜಾಣೆಯರ ಬಳಗದಿಂದ ಏರ್ಪಡಿಸಿದ್ದ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ,‘ಲೇಖಕರು ವೈಚಾರಿಕತೆಯ ನಿಲುವುಗಳಿಗೆ ಬದ್ಧರಾಗಿರಬೇಕು. ಅಲ್ಲದೇ ಏನೇ ಮಾತನಾಡಿದರೂ ನೆಲೆಗಟ್ಟಿನ ಚೌಕಟ್ಟಿನೊಳಗೆ ಮಾತನಾಡಬೇಕು’ ಎಂದರು.
ಸಮಾರಂಭದಲ್ಲಿ ಹಿರಿಯ ಸಾಹಿತಿಗಳ ಬದುಕು-ಬರಹ ಸಾಹಿತ್ಯದ ನೆಲೆಗಟ್ಟು ಇಂದಿನ ಯುವ ಸಾಹಿತಿಗಳ ತವಕ– ತಲ್ಲಣಗಳ ಬಗ್ಗೆ ಗಂಭೀರವಾದ ಸಂವಾದ, ಚರ್ಚೆ ನಡೆದವು.
ಬಿ.ಇಡಿ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.
ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಆವಂಟಿ ಅಧ್ಯಕ್ಷತೆ ವಹಿಸಿದ್ದರು.
ಯುವ ಸಾಹಿತಿ ಪಂಚಾಕ್ಷರಿ ಹಿರೇಮಠ, ಬಸವರಾಜ ಸಿನ್ನೂರ, ಶಭಾನಾ, ಪೂರ್ಣಿಮಾ ಹಿರೇಮಠ, ಈರಮ್ಮ ಇದ್ದರು. ಶಿಲ್ಪಾ ಪ್ರಾರ್ಥಿಸಿದರು, ಸುಷ್ಮಾ ಸ್ವಾಗತಿಸಿದರು. ವಿನಾಯಕ ಕಾರ್ಯಕ್ರಮ ನಿರೂಪಿಸಿದರು.