ಮಂಜಲಾಪುರ (ಯಾದಗಿರಿ): ಜಿಲ್ಲೆಯ ಸುರಪುರ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಮತ್ತು ಬೀಜ ಘಟಕ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಆಶ್ರಯದಲ್ಲಿ ಮಂಜಲಾಪುರ ಗ್ರಾಮದಲ್ಲಿ ಬೀಜ ಗ್ರಾಮ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಮರೇಶ ವೈ.ಎಸ್ ಮಾತನಾಡಿ, ‘ಬೀಜ ಗ್ರಾಮ ಕಾರ್ಯಕ್ರಮ ಬೀಜಗಳ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಿದೆ. ಪ್ರಮಾಣೀಕರಿಸಿದ ಸಂಸ್ಥೆಗಳಿಂದ ಬೀಜ ಪಡೆದುಕೊಂಡು ಬೀಜ ಉತ್ಪಾದನೆ ಮಾಡುವುದರಿಂದ ಬಿತ್ತನೆಯ ಸಮಯದಲ್ಲಿ ಬೀಜದ ಕೊರತೆ ಆಗದಂತೆ ಮಾಡಬಹುದು. ಬೀಜ ಉತ್ಪಾದನೆಯಲ್ಲಿ ನಿರ್ದಿಷ್ಟ ಬೆಳೆಗಾಗಿ ಕೈಗೊಳ್ಳಬೇಕಾದ ಬಿತ್ತನೆಯ ಅಭ್ಯಾಸಗಳು, ತಂತ್ರಜ್ಞಾನಗಳು, ಪ್ರತ್ಯೇಕ ದೂರ ಇತ್ಯಾದಿಗಳನ್ನು ರೈತರಿಗೆ ಹೇಳಿದರು.
ತೋಟಗಾರಿಕೆ ವಿಜ್ಞಾನಿ ಡಾ.ಸತೀಶಕುಮಾರ ಕಾಳೆ, ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಿಗೆ ಯಾವ ಬೀಜಗಳನ್ನು ಬೀಜೋತ್ಪಾದನೆ ಮಾಡಲು ಸೂಕ್ತ ಎಂದು ತಿಳಿಸಿದರು.
ತಮ್ಮ ಗ್ರಾಮದಲ್ಲಿ ಬೀಜೋತ್ಪಾದನೆ ಮಾಡಿ ಬೇರೆ ರೈತರಿಗೆ ಬೀಜಗಳನ್ನು ನೀಡಬೇಕು. ತೊಗರಿ, ಕಡಲೆ, ಹೆಸರು ಬೆಳೆಗಳ ಹೊಸ ತಳಿಗಳ, ಇಳುವರಿ, ಅವಧಿ, ರೋಗ ಮತ್ತು ಕೀಟಗಳ ನಿರೋಧಕ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ಕೀಟಶಾಸ್ತ್ರದ ವಿಜ್ಞಾನಿ ಡಾ.ಗುರುಪ್ರಸಾದ ಎಚ್. ಮಾತನಾಡಿ, ರೈತರು ಬೀಜ ಉತ್ಪಾದನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಬೇಸಾಯ ಕ್ರಮಗಳು, ಸಸ್ಯ ಸಂರಕ್ಷಣೆಯ ಕ್ರಮಗಳು ಮತ್ತು ಕೊಯ್ಲು ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಶಾರುಖಾನ್, ನಾಡಗೌಡ, ಹಣಮಂತ ಯಾದವ, ಮಂಜಲಾಪುರ ಗ್ರಾಮದ ರೈತರಾದ ನಿಂಗಪ್ಪ, ಸೋಮಲಿಂಗಪ್ಪ, ಬಸಪ್ಪ ಇದ್ದರು.