ಸುರಪುರ: ಆಧುನಿಕತೆ ಬೆಳೆದಂತೆ ಪ್ರಾಣಿ, ಪಕ್ಷಿಗಳ ಸಂತತಿ ಕಡಿಮೆ ಆಗುತ್ತಿದೆ. ಸರಿಸೃಪಗಳ ಸಹ ಕ್ಷೀಣಿಸುತ್ತಿವೆ. ತಾಲ್ಲೂಕಿನ ಚಂದಲಾಪುರದ ವಿಶ್ವರಾಜ ಒಂಟೂರ ಎಂಬುವವರು ಹಾವುಗಳನ್ನು ಹಿಡಿದು ಕಾಡಿನಲ್ಲಿ ಬಿಟ್ಟು ಅವುಗಳ ರಕ್ಷಣೆ ಮಾಡುತ್ತಿದ್ದಾರೆ.
ಸ್ನಾತಕೋತ್ತರ ಪದವೀಧರರಾದ ವಿಶ್ವರಾಜ 2013ರಲ್ಲಿ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬಿ.ಪಿ.ಇಡಿ ಓದಿದ್ದರು. ಮಠದ ಗುರುಗಳ ಪ್ರವಚನದಿಂದ ಪ್ರಭಾವಿತರಾಗಿ, ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡರು.
ಒಮ್ಮೆ ಜಿಮ್ಗೆ ಹಾವೊಂದು ಬಂದಿತ್ತು. ದೈಹಿಕ ಶಿಕ್ಷಣ ಶಿಕ್ಷಕ ಸಿದ್ದಪ್ಪ ಅವರು ಹಾವು ಹಿಡಿದು ಕಾಡಿಗೆ ಬಿಟ್ಟರು. ಇದರಿಂದ ಪ್ರಭಾವಿತರಾದ ವಿಶ್ವರಾಜ ಅವರು ಹಾವು ಹಿಡಿಯುವ ವಿಧಾನವನ್ನು ಸಿದ್ದಪ್ಪ ಅವರಿಂದ ಕಲಿತರು.
ಶಿಕ್ಷಣ ಮುಗಿದ ಬಳಿಕ ಸ್ವಗ್ರಾಮ ಚಂದಲಾಪುರಕ್ಕೆ ಬಂದು ಇಲ್ಲಿಯವರೆಗ ಸುಮಾರು 50ಕ್ಕೂ ಹಾವು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಮನೆಯವರ ವಿರೋಧದ ನಡುವೆಯೂ ವಿಷಸರ್ಪಗಳ ರಕ್ಷಿಸುವ ಕಾರ್ಯ ಬಿಡುತ್ತಿಲ್ಲ.
‘ಹಾವು ಹಿಡಿಯಲು 6 ಅಡಿ ಉದ್ದದ ಎರಡು ಕೋಲು ತೆಗೆದುಕೊಳ್ಳಬೇಕು. ಒಂದನ್ನು ಹಾವಿನ ನಡುಭಾಗಕ್ಕೆ ಮತ್ತೊಂಡು ತಲೆಯಿಂದ ಸ್ವಲ್ಪ ಹಿಂದೆ ಒತ್ತಿ ಹಿಡಿಯಬೇಕು. ಕೆಲಹೊತ್ತಿನ ಬಳಿಕ ಹಾವಿನ ಕೋಪ ತಗ್ಗುತ್ತದೆ. ತಕ್ಷಣವೇ ಹೆಡೆಯ ಸ್ವಲ್ಪ ಕೆಳಭಾಗದಲ್ಲಿ ಕೈಯಿಂದ ಒತ್ತಿ ಹಿಡಿಯಬೇಕು. ಇನ್ನೊಂದು ಕೈಯಿಂದ ದೇಹದ ನಡುಭಾಗ ಹಿಡಿಯಬೇಕು‘ ಎಂದು ವಿಶ್ವರಾಜ ಹಾವಿ ಹಿಡಿಯುವ ವಿಧಾನ ವಿವರಿಸಿದರು.
‘ಯಾವುದೇ ಹಾವಿನಿಂದ ನನಗೆ ತೊಂದರೆ ಆಗಿಲ್ಲ. ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲು ಹೆರೆವುದು ವಾಡಿಕೆ. ಜೀವಿತ ಹಾವು ಕಂಡರೆ ಬಡಿಗೆ ಹಿಡಿದು ಕೊಲ್ಲುತ್ತಾರೆ. ಸರಿಸೃಪಗಳು ಪರಿಸರ ಸಮತೋಲನೆ ಕಾಪಾಡುವ ಅಪರೂಪದ ಜೀವಿಗಳು. ಅವುಗಳನ್ನು ರಕ್ಷಿಸಬೇಕು’ ಎಂದರು.
‘ನಾಗರ ಹಾವು, ಗೋಧಿ ನಾಗರ, ಮಣ್ಣಮುಕ್, ಕ್ಯಾರಿ ಹಾವು, ಮಂಡಲ ಹಾವು, ಹಸಿರು ಹಾವಿನ ಪ್ರಬೇಧಗಳಿವೆ. ಹಾವು ಕಂಡರೆ 9901710590 ಸಂಖ್ಯೆಗೆ ಸಂಪರ್ಕಿಸಲು’ ಕೋರಿದರು.