ಯಾದಗಿರಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧಾರಿತ ‘ಮಹಾನಾಯಕ’ ಧಾರಾವಾಹಿಗೆ ನಾಯ್ಕಲ್ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ಅವರ ಅಭಿಮಾನಿ ಬಳಗದ ನೂರಾರು ಯುವಕರು ಹಾಗೂ ಕಾರ್ಯಕರ್ತರು ಬೆಂಬಲ ಸೂಚಿಸಿ ಸಂಭ್ರಮಾಚರಣೆ ಮಾಡಿದರು.
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಅಳವಡಿಸಲಾದ ಅವರ ಜೀವನ ಚರಿತ್ರೆ ಆಧಾರಿತ ‘ಮಹಾನಾಯಕ’ ಧಾರಾವಾಹಿ ಪ್ರಸಾರದ ಬೃಹದಾಕಾರದ ಬ್ಯಾನರ್ (ಕಟೌಟ್)ನ್ನು ಶನಿವಾರ ಬೆಳಿಗ್ಗೆ ಅನಾವರಣಗೊಳಿಸಲಾಯಿತು.
ಧಾರಾವಾಹಿ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿಗೆ ಬೆಂಬಲ ಸೂಚಿಸಿದರು. ಧಾರಾವಾಹಿ ಪ್ರಸಾರಕ್ಕೆ ಬೆದರಿಕೆ ಒಡ್ಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸೂಕ್ತ ತನಿಖೆ ಕೈಗೊಂಡು ಅವರನ್ನು ಬಂಧಿಸುವಂತೆ ಆಗ್ರಹಿಸಿದರು.
ಇದಕ್ಕೂ ಮುಂಚೆ ಡಾ. ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ವೆಂಕೋಬ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿದರು.
ಯುವಕರಾದ ದೇವು ಡಿ.ಪಿ, ಮರಿಲಿಂಗಪ್ಪ ಭಂಡಾರಿ, ಪ್ರವೀಣಕುಮಾರ ಕೊಂಬಿನ್, ಸೈದಪ್ಪ ಕಣಜೀಕರ್, ಪಾರ್ಥ ಚಟ್ನಳ್ಳಿ, ಸುರೇಶ ಕಣಜೀಕರ್, ವಿಜಯ ಮಲ್ಲ ಗೋಗಿ, ರಾಮ ಕುಮಾರ ಬದ್ದೇಳ್ಳಿ, ಪವನ್ ಪೋತರಾಜ್, ಮಾಧವ್ ತುಮಕೂರ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.