ಯಾದಗಿರಿ: ಜಿಲ್ಲೆಯು ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ಯುಗಾದಿ, ಈದ್ ಉಲ್ ಫಿತ್ರ್(ರಂಜಾನ್) ಹಬ್ಬ ಒಟ್ಟೊಟ್ಟಿಗೆ ಬಂದಿವೆ. ಏಪ್ರಿಲ್ 9ರಂದು ಚಂದ್ರಮಾನ ಯುಗಾದಿ, ಏ. 10ರಂದು ರಂಜಾನ್ ಆಚರಣೆ ನಡೆಯಲಿದೆ. ಆದರೆ, ಚಂದ್ರ ದರ್ಶನವಾದ ನಂತರ ಮುಸ್ಲಿಮರು ಹಬ್ಬ ಆಚರಿಸುತ್ತಾರೆ.
ಜಿಲ್ಲೆಯೂ ಧಾರ್ಮಿಕ ಸಹಿಷ್ಣುತೆಗೆ ಹೆಸರುವಾಸಿಯಾಗಿವೆ. ಹಿಂದೂ ಮುಸ್ಲಿಂ ಭಾವೈಕ್ಯದ ಹಲವಾರು ದೇವಾಲಯ, ದರ್ಗಾಗಳಿವೆ. ಹಿಂದೂಗಳು ಯುಗಾದಿ ಹಬ್ಬದಂದು ಬೇವು–ಬೆಲ್ಲ ತಯಾರಿಸಿ, ಮುಸ್ಲಿಮರನ್ನು ಮನೆಗೆ ಕರೆದು ಒಟ್ಟಾಗಿ ಪರಸ್ಪರ ಬೇವು ಸ್ವೀಕರಿಸಿ ಹಬ್ಬದ ಶುಭಾಶಯಗಳು ಕೋರುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗುತ್ತಾರೆ.
ಭಾವೈಕ್ಯತೆ ತಾಣವಾಗಿರುವ ತಿಂಥಣಿ ಮೌನೇಶ್ವರ ದೇವಸ್ಥಾನ, ಕೊಡೇಕಲ್ಲ ಕಾಲಜ್ಞಾನಿ ಬಸವೇಶ್ವರ ಸೇರಿದಂತೆ ವಿವಿಧೆಡೆ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.
15ನೇ ಶತಮಾನದಲ್ಲಿ ಆಗಿ ಹೋದ ಮಹಾನ್ ಸಂತರಲ್ಲಿ ಕೊಡೇಕಲ್ಲ ಬಸವೇಶ್ವರರು ಅಗ್ರಗಣ್ಯರು. ‘ಒಂದೇ ಹಾಸಿಗೆ ಪೃಥ್ವಿ ಸಕಲಕೆ, ಒಂದೇ ಹೊದಿಕೆ ಆಕಾಶ ಮೇಲಕೆ, ಒಂದೇ ಜಲ ಮೇಘದಲಿ, ವಾಯು ಒಂದೇ, ಒಂದೇ ವಡಬಾಗ್ನಿ ಆಹುತಿ ಒಂದರೊಳು, ನೂರೊಂದು ಮಾಡುವ ಸಂದೇಹಿಗಳು, ನಮ್ಮ ನೆತ್ತರ ಬಲ್ಲರೇನಯ್ಯ ಬಸವ ಕೇಳೆಂದ’ ಎಂದು ಅವರು ತಮ್ಮ ವಚನಗಳಲ್ಲಿ ಸಾರಿದ್ದಾರೆ.
ಜಾತಿ, ಮತ, ಪಂಥಗಳ ಎಲ್ಲೆ ಮೀರಿದ ಸಮಾಜವಿದ್ದರೇ ಒಳ್ಳೆಯದು ಎಂಬ ಸಂದೇಶ ನೀಡಿದ್ದಾರೆ. ಅವರು ಅದರಂತೆಯೇ ನಡೆದುಕೊಂಡಿದ್ದಾರೆ. ಕೊಡೇಕಲ್ಲ ಬಸವೇಶ್ವರರು ಚರ್ಮಾಂಭರ ಧರಿಸಿ, ಒಂದು ಕಾಲಲ್ಲಿ ಕಂಸಿ(ಮುಸ್ಲಿಮರು ಧರಿಸುವ ಪಾದರಕ್ಷೆ), ಒಂದು ಕಾಲಲ್ಲಿ (ರಕ್ಷೆ) ಪಾದರಕ್ಷೆ ಧರಿಸಿ ಅಶ್ವರೂಢರಾಗಿದ್ದು, ಒಂದು ಕೈಯಲಿ ಹಂಡಿ ಹಿಡಿದಿದ್ದು ಕಾಲಜ್ಞಾನದ ಸಮಾನತೆಯ ತತ್ವ ಬೋಧಿಸಿದ್ದಾರೆ.
ಅದರ ಪ್ರತೀಕವಾಗಿ ಕೊಡೇಕಲ್ಲ ಬಸವೇಶ್ವರ ಜಾತ್ರೆಯಲ್ಲಿ ಮುಸ್ಲಿಮರು, ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ಇಲ್ಲಿ ದೂಳ್ ಗಾಯಿ ಒಡೆಯಲಾಗುತ್ತದೆ. ದೇವಸ್ಥಾನದ ಒಳಗೆ ಹಿಂದೂ ವಾಸ್ತು ವಿನ್ಯಾಸ, ಹೊರಗೆ ದರ್ಗಾ ಮಿಶ್ರ ಶೈಲಿಯಲ್ಲಿನ ಕಟ್ಟಡ, ಹಸಿರು ಧ್ವಜ ಮುಂತಾದವು ಸಮಾನತೆಯ ಕುರುಹುಗಳು. ಓಂ ಏಕಲಾಕ ಐಂಸಿ ಹಜಾರ ಪಾಚೋಪೀರ್ ಮೌನೋದ್ದೀನ್ ಕಾಶಿಪತಿ ಗಂಗಾಧರ ಹರಹರ ಮಹಾದೇವ ಸರ್ವಧರ್ಮ ಸಮನ್ವಯತೆಯ ಈ ಶ್ಲೋಕ ಮೌನೇಶ್ವರರ ಮೂಲಮಂತ್ರ.
ಪೂರಕ ವರದಿ: ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.