ಸುರಪುರ: ‘ಎಲ್ಲ ಜಿಲ್ಲೆಗಳಲ್ಲಿ ಆಯಾ ಭಾಗದ ಸಾಹಿತಿಗಳ ಹೆಸರಲ್ಲಿ ಪ್ರತಿಷ್ಠಾನಗಳಿವೆ. ಆದರೆ ಕಲ್ಯಾಣ ಕರ್ನಾಟಕಕ್ಕೆ ಪ್ರತಿಷ್ಠಾನ ನೀಡುವಲ್ಲಿ ಸರ್ಕಾರ ಮಲತಾಯಿ ದೋರಣೆ ಅನುಸರಿಸುತ್ತಿದೆ’ ಎಂದು ಸಾಹಿತಿ, ನಾಟಕ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕಡಕೋಳ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಸಂಘದ ಸಹಸ್ರಚಂದ್ರಮಾನೋತ್ಸವ ಮತ್ತು ಮೂರು ಪುಸ್ತಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಭಾಗದ ಕವಿ, ಸಾಹಿತಿಗಳ ಹೆಸರಲ್ಲಿ ಪ್ರೆತಿಷ್ಠಾನ ಸ್ಥಾಪಿಸಿ ಸಾಂಸಕೃತಿಕ ಕಾರ್ಯಕ್ರಮ, ಪುಸ್ತಗಳನ್ನು ಹೊರ ತರಬಹುದು. ಆದರೆ ನಿಮ್ಮಲ್ಲಿ ಆಸಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಹರಿಹಾಯ್ದರು.
ಈ ಭಾಗದ ಸಾಹಿತಿಗಳು ಜನಪ್ರತಿನಿಧಿಗಳು ಹೋರಾಟಕ್ಕೆ ಸಿದ್ದರಾಗಬೇಕು, ಹೆಚ್ಚು ಪ್ರತಿಷ್ಠಾನ ಮತ್ತು ಅಕಾಡೆಮಿಗಳನ್ನು ತಂದು ಈ ಭಾಗದ ಪ್ರತಿಭಾನ್ವಿತರಿಗೆ, ಲೇಖಕರಿಗೆ, ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಮತ್ತು ಕಡಕೋಳ ಅವರ ನಡುವೆ ಕೆಲ ಸಮಯ ಸುದೀರ್ಘ ಚೆರ್ಚ ನಡೆಯಿತು ಆರೋಗ್ಯಯುತವಾದ ಚರ್ಚೆ ಅನೇಕರನ್ನು ಎಚ್ಚರಿಸಿತು.
ಪಾರ್ವತಿ ದೇಸಾಯಿಯವರ ಭಾವ ಬಾಂದಳ, ಗೋಪಣ್ಣ ಯಾದವ್ ಅವರ ಹೆಬ್ಬಂಡೆಯ ಮೇಲೆ ಹೆಜ್ಜೆ, ಶ್ರೀನಿವಾಸ ಜಾಲವಾದಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಸುರಪುರ ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಬಸವರಾಜ, ಜೆ. ಅಗಸ್ಟೀನ್, ಜಯಲಲಿತಾ ಪಾಟೀಲ, ರಾಜಶೇಖರ ದೇಸಾಯಿ, ದೇವು ಹೆಬ್ಬಾಳ ಇದ್ದರು.
ಸಾಹಿತ್ಯ ಅಕಾಡೆಮಿ ಪ್ರಕಟಿತ ಕೃತಿಯ ಲೇಖಕ ಶ್ರೀನಿವಾಸ ಜಾಲವಾದಿಯರನ್ನು ಸನ್ಮಾನಿಸಲಾಯಿತು.