ಶಹಾಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ನಾರಾಯಣಪುರ ಹಾಗೂ ಭೀಮರಾಯನಗುಡಿ ವ್ಯಾಪ್ತಿಯಲ್ಲಿ ಸುಮಾರು ₹1.035 ಕೋಟಿ ವೆಚ್ಚದಲ್ಲಿ ಕಾಲುವೆಗಳಿಗೆ ಗೇಟ್ ಅಳವಡಿಸುವ ಕಾರ್ಯದಲ್ಲಿ ಅಕ್ರಮ ಹಾಗೂ ಕಳಪೆ ಕಾಮಗಾರಿ ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ತನಿಖೆಗೆ ಆದೇಶ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬುಧವಾರ ಶಹಾಪುರ ನಗರಕ್ಕೆ ಆಗಮಿಸಿದಾಗ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವಾರಬಂದಿನಿಯಮ ಅವೈಜ್ಞಾನಿಕ.ಕಾಲುವೆ ಜಾಲದ ದುರಸ್ತಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವೆ ಎಂದರು.
ಸುರಪುರ ತಾಲ್ಲೂಕಿನ ಪೀರಾಪೂರ-ಬುದನೂರ ಏತ ನೀರಾವರಿ ಯೋಜನೆ ಅಂದಾಜು ₹5480ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಇದರಿಂದ 48ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರಿನ ಸೌಲಭ್ಯ ದೊರಕಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಕ್ಷೇತ್ರದ ಶಾಸಕರಿಗೆ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಚಿವರು ಅದೆಲ್ಲ ಸುಳ್ಳು, ನಮ್ಮ ಇಲಾಖೆಯಲ್ಲಿ ಎಲ್ಲಾ ಶಾಸಕರಿಗೂ ಸಮರ್ಪಕವಾಗಿ ಅನುದಾನ ನೀಡಿರುವೆ. ಸರ್ಕಾರ ಸಹ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಿಲ್ಲ ಎಂದರು.
ಶಹಾಪುರ ನಗರಕ್ಕೆ ಭೀಮಾ ನದಿಯಿಂದ ಶಾಶ್ವತವಾದ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸಿಲ್ಲ. ಕ್ಷೇತ್ರದ ಪ್ರತಿಯೊಬ್ಬರೂ ನೀರು ಕುಡಿಯುತ್ತಾರೆ. ಕುಡಿಯುವ ನೀರಿಗಾಗಿ ಲವದಷ್ಟು ತೊಂದರೆಯಿಲ್ಲ ಮತ್ತು ಅನುದಾನದ ಕೊರತೆಯಿಲ್ಲ ಎಂದರು.
ಬುಧವಾರ ‘ಪ್ರಜಾವಾಣಿ’ ಯಲ್ಲಿ ವಾಲ್ಯೂಮೆಟ್ರಿಕ್ ಗೇಟ್ ಅಳವಡಿಕೆ ಮಾಹಿತಿ ಬರ ಎಂಬ ಸುದ್ದಿ ಪ್ರಕಟವಾಗಿತ್ತು.
ಸುರಪುರ ಶಾಸಕ ರಾಜೂಗೌಡ ನಾಯಕ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ದೊಡ್ಡಪ್ಪಗೌಡ ನರಬೋಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಅಮಾತೆಪ್ಪ ಕಂದಕೂರ, ಗುರು ಕಾಮಾ ಇದ್ದರು.