ಮುಂಬೈ: ಪಂದ್ಯದ ಕೊನೆಯಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಸೋಲಬೇಕಾಯಿತು ಎಂದು ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಹೇಳಿದರು.
ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದ ನಂತರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಈ ಪಂದ್ಯದಲ್ಲಿ ಸನ್ರೈಸರ್ಸ್ ತಂಡ ಒಂದು ವಿಕೆಟ್ ಅಂತರದಿಂದ ರೊಚಕ ಜಯ ಸಾಧಿಸಿತ್ತು.
‘ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡೆವು. ಇನ್ನಷ್ಟು ಯೋಜನಾಬದ್ದವಾಗಿ ಆಡಿದ್ದರೆ ಗೆಲುವು ಸಾಧ್ಯವಿತ್ತು. 160ರಿಂದ 170 ರನ್ಗಳ ಗುರಿ ನೀಡಿದ್ದರೆ ಎದುರಾಳಿ ತಂಡಕ್ಕೆ ಕಷ್ಟವಾಗುತ್ತಿತ್ತು’ ಎಂದು ಅವರು ಹೇಳಿದರು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ನಂತರ ಗುರಿ ಬೆನ್ನತ್ತಿದ್ದ ಸನ್ರೈಸರ್ಸ್ ತಂಡವು 9 ವಿಕೆಟ್ ಕಳೆದುಕೊಂಡು ಕೊನೆಯ ಎಸೆತದಲ್ಲಿ ಪಂದ್ಯ ಗೆದ್ದಿತು.
‘ಕೇವಲ ಒಂದು ವಿಕೆಟ್ ಪಡೆದಿದ್ದರೆ ಜಯದ ದಡ ತಲುಪಬಹುದಿತ್ತು. ಒಳ್ಳೆಯ ಪೈಪೋಟಿ ನೀಡಿದರೂ, ಪಂದ್ಯ ನಮ್ಮ ಕೈ ಜಾರಿತು’ ಎಂದು ಬೇಸರ ವ್ಯಕ್ತಪಡಿಸಿದರು.
ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಆಡಿಸದ ಬಗ್ಗೆ ಮಾತನಾಡಿದ ಅವರು, ‘ಹಾರ್ದಿಕ್, ಕಾಲು ನೋವಿನಿಂದ ಬಳಲುತ್ತಿದ್ದಾರೆ. ಆದ್ದರಿಂದ, ಅವರು ಆಡಲಿಲ್ಲ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದು ಮುಂದಿನ ಪಂದ್ಯಗಳಲ್ಲಿ ಆಡುವ ಭರವಸೆ ಇದೆ’ ಎಂದು ತಿಳಿಸಿದ್ದಾರೆ.