ಹುಣಸಗಿ: ಇಲ್ಲಿಗೆ ಸಮೀಪದ ರಾಜನಕೋಳೂರು ಸೀಮಾಂತರದ ಬಹುನಿರೀಕ್ಷಿತ ಏತ ನೀರಾವರಿ ಪ್ರದೇಶದ ಕಾಲುವೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ತಂಬಿದೊರೈ ಅವರಿಂದ ಮಾಹಿತಿ ಪಡೆದು ಶೀಘ್ರ ನೀರು ಹರಿಸುವ ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಲುವೆ ನಿರ್ಮಿಸುವಾಗ ಹಲವು ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ನೀಡಲಾಗಿತ್ತು. ಆದರೆ, ರಾಜನಕೋಳೂರು ಸೀಮಾಂತರದ ಸರ್ವೆ ನಂ.262ರ ರೈತನಿಗೆ ಪರಿಹಾರ ಸಿಕ್ಕಿರಲಿಲ್ಲ. ಈಗಾಗಿ ಆ ರೈತ ತನ್ನ ಜಮೀನಿನಲ್ಲಿನ ಕಾಲುವೆಯನ್ನು ಮುಚ್ಚಿದ್ದ’ ಎಂದರು.
‘ಸದ್ಯ 1,500 ಹೆಕ್ಟೇರ್ ಭೂಮಿ ಕಾಲುವೆ ನೀರಿನಿಂದ ವಂಚಿತವಾಗಿದೆ. ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದ್ದರೂ ಕೂಡ ನೀರು ಹರಿಯದಿರುವುದು ಬೇಸರದ ಸಂಗತಿ. ಸ್ವಾಧೀನಪಡಿಸಿಕೊಂಡಿರುವ ಭೂಮಿಯ ರೈತನಿಗೆ ಶೀಘ್ರದಲ್ಲೇ ಪರಿಹಾರ ನೀಡಿ, ನೀರು ಹರಿಸಲಾಗುವುದು. ರೈತರು ತಾಳ್ಮೆಯಿಂದ ಇರಬೇಕು’ ಎಂದು ಮನವಿ ಮಾಡಿದರು.
ಸೂಲಪ್ಪ ಕಮತಗಿ, ವೆಂಕೋಬ ಸಾಹುಕಾರ ಮಂಗಳೂರು, ತಿರುಪತಿ ಸಾಹುಕಾರ ವಡಗೇರಿ, ಎಂ.ಆರ್.ಪಾಟೀಲ, ಸಿದ್ಧನಗೌಡ ಲಿಂಗದಳ್ಳಿ, ವೀರಣ್ಣಗೌಡ ಗುಳಬಾಳ, ಅಶೋಕ ಸಾಸನೂರು, ಪ್ರಭುಗೌಡ ಗುಳಬಾಳ, ರಾಮನಗೌಡ ಲಿಂಗದಳ್ಳಿ ಸೇರಿದಂತೆ ನಿಗಮದ ಸಿಬ್ಬಂದಿ ಇದ್ದರು.