ಶಹಾಪುರ: ಶಹಾಪುರ -ವಿಜಾಪೂರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ದರ್ಶನಾಪೂರ ಗ್ರಾಮ ಸೀಮಾಂತರದ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್ಎಲ್) ಸರ್ಕಾರಿ ಜಮೀನನ್ನು ಶಾಸಕರ ಅವರ ಸಂಬಂಧಿಯೊಬ್ಬರು ಅತಿಕ್ರಮಿಸಿ ಕೊಂಡು ಹಲವಾರು ವರ್ಷಗಳಿಂದ ವಾಸವಾಗಿ ತೋಟ ನಿರ್ಮಿಸಿದ್ದಾರೆ.
ಕೆಬಿಜೆಎನ್ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಕ್ಷಣ ನಿಗಮದ ಜಮೀನು ವಶಪಡಿಸಿಕೊಳ್ಳಬೇಕೆಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ ಆಗ್ರಹಿಸಿದ್ದಾರೆ.
ಕೆಬಿಜೆಎನ್ಎಲ್ ನಿಗಮದಿಂದ ರಸ್ತೆ ನಿರ್ಮಾಣ ದೃಷ್ಟಿಯಿಂದ ಅಚ್ಚುಕಟ್ಟು ರಸ್ತೆ ಎಂಬ ಪ್ರತ್ಯೇಕ ವಿಭಾಗದ ಕಾರ್ಯಾಲಯ ಹಾಗೂ ವಸತಿಗೃಹಗಳ ಸಲುವಾಗಿ ಹಾಗೂ ಕಚೇರಿ ನಿರ್ಮಾಣಕ್ಕೆ ಎಕರೆಗಟ್ಟಲೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಅದರಂತೆ ತಾಲ್ಲೂಕಿನ ದರ್ಶನಾಪೂರ ಗ್ರಾಮದ ಸೀಮಾಂತರ ಸರ್ವೇನಂಬರ 49ರಲ್ಲಿ ಒಟ್ಟು 19 ಎಕರೆ 32ಗುಂಟೆ ಜಮೀನು ಇದೆ. ಅದರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದವರು 4 ಎಕರೆ 28 ಗುಂಟೆ ಜಾಗವನ್ನು 25 ವರ್ಷಗಳ ಹಿಂದೆ ವಶಪಡಿಸಿಕೊಂಡಿದ್ದಾರೆ. ಪಾಹಣಿ ಪತ್ರಿಕೆಯಲ್ಲಿ ಸಹ ನಿಗಮದ ಜಮೀನು ಎಂದು ನಮೂದಿಸಿದ್ದಾರೆ.
ವಾಸ್ತವಾಗಿ ಮಾತ್ರ ಶಾಸಕರ ಸಂಬಂಧಿಯೊಬ್ಬರು ನಿಗಮದ ಜಾಗವನ್ನು ಅತಿಕ್ರಮಿಸಿೊಂಡು ತೋಟ ನಿರ್ಮಿಸಿ ರಾಜಕೀಯ ಚಟುವಟಿಕೆಯ ತಾಣವನ್ನಾಗಿ ರೂಪಿಸಿದ್ದಾರೆ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಹಾಗೂ ದಾವಲಸಾಬ ನದಾಫ್ ಆರೋಪಿಸಿದ್ದಾರೆ.
ಅದೇ ಬಡ ನಿರ್ಗತಿಕರು ನಿಗಮದ ಒಂದಿಷ್ಟು ಜಾಗದಲ್ಲಿ ಗುಡಿಸಲು ಹಾಕಿಕೊಂಡು ಉಪಜೀವಿಸುತ್ತಿದ್ದರೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಪೊಲೀಸ ಬಲಪ್ರಯೋಗಿಸಿ ತೆರವುಗೊಳಿಸಿ ಬಿಡುತ್ತಾರೆ. ವಿಚಿತ್ರವೆಂದರೆ ಲಕ್ಷಾವಧಿ ಮೌಲ್ಯದ ನಿಗಮದ ಆಸ್ತಿ ಕಬಳಿಕೆಯಾದರು ಕೂಡಾ ಯಾವುದೇ ಕ್ರಮ ತೆಗೆದುಕೊಳ್ಳದೆ ಜಾಣ ಕಿವುಡರಾಗಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಕ್ಷಣ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಭೀಮರಾಯನಗುಡಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ಹೈಯ್ಯಾಳಪ್ಪ ಹೈಯ್ಯಾಳಕರ್ ಎಚ್ಚರಿಕೆ ನೀಡಿದ್ದಾರೆ.