ಸುರಪುರ: ‘ಕಲ್ಲು ಕಟೆದು ಮೂರ್ತಿಯನ್ನಾಗಿಸಿ ಆ ಕಲ್ಲಿನಲ್ಲಿಯೇ ದೈವಿ ಸ್ವರೂಪ ಕಾಣುವ ಭೋವಿ ವಡ್ಡರ ಬದುಕು ಅತ್ಯಂತ ಶೊಚನೀಯ ಸ್ಥಿತಿ ಯಲ್ಲಿದೆ’ ಎಂದು ಕರ್ನಾಟಕ ಬೋವಿ ವಡ್ಡರ ಸಮಾಜದ ರಾಜ್ಯ ಘಟಕದ ಸಂಘ ಟನಾ ಕಾರ್ಯದರ್ಶಿ ಡಿ. ರಂಗನಾಥ ವಿಷಾದಿಸಿದರು.
ತಿಮ್ಮಾಪುರದ ವಡ್ಡರ ಕಾಲೊ ನಿಯಲ್ಲಿರುವ ಮರಗಮ್ಮ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ‘ಬೆರಳೆಣಿಕೆಯಷ್ಠಿರುವ ಭೋವಿ (ವಡ್ಡರ) ಸಮುದಾಯ ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿದೆ. ಸಾಮಾ ಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಭೋವಿ ಜನಾಂಗ ಸಂಘಟಿತರಾಗುವುದು ಅಗತ್ಯ ವಾಗಿದೆ’ ಎಂದರು.
‘ಅಕ್ಷರ ಸಂಸ್ಕೃತಿಯಿಂದ ದೂರ ಉಳಿದಿರುವ ಭೋವಿ ಅನಕ್ಷರಸ್ಥ ಸಮು ದಾಯವಾಗಿದೆ. ರಟ್ಟೆಯೊಳಗಿನ ಶಕ್ತಿಯನ್ನೆ ನಂಬಿ ಬದುಕುವ ಭೋವಿ ಜನಾಂಗ ಒಗ್ಗಟ್ಟಾಗುವುದು ಅತ್ಯಂತ ಅವಶ್ಯಕವಾಗಿದೆ. ತಳಸಮುದಾಯಗಳಲ್ಲಿಯೇ ಅತ್ಯಂತ ಬಡತನ ಮತ್ತು ಸಂಕಷ್ಟದಲ್ಲಿರುವ ಭೋವಿ ವಡ್ಡರ ಜನಾಂಗವನ್ನು ಕಡೆ ಗಣಿಸಲಾಗಿದೆ’ ಎಂದರು.
‘ಬಡತನ ಸಮಾಜಕ್ಕೆ ಶಾಪವಾಗಿ ಕಾಡುತ್ತಿದೆ. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಇದನ್ನು ಹೋಗಲಾಡಿಸಲು ಆಸಕ್ತಿ ತೋರಿಲ್ಲ. ಸಮಾಜದ ಅಭಿವೃದ್ದಿಗೆ ವಿಶೇಷ ಯೋಜನೆ ಜಾರಿಗೊಳಿಸಿಲ್ಲ. ನಮ್ಮಿಂದ ಮತ ಪಡೆಯವ ಜನಪ್ರತಿನಿಧಿಗಳು ನಮ್ಮ ಅಬಿವೃದ್ದಿ ಬಗ್ಗೆ ಪ್ರಾಮಾಣಿಕವಾಗಿ ಪಯತ್ನಿಸಿಲ್ಲ’ ಎಂದು ದೂರಿದರು.
‘ಸಮುದಾಯಕ್ಕೆ ನೀಡಿರುವ ಮೀಸಲಾತಿ ಸೌಲಭ್ಯವನ್ನು ಕಸಿದುಕೊಳ್ಳಲು ಕೆಲ ಸಮುದಾಯಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ, ಮೀಸಲಾತಿಯಿಂದ ಸಮಾಜದ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬಗ್ಗೆ ಸಮಾಜಬಾಂಧವರು ಜಾಗೃತರಾಗಬೇಕು. ನಮ್ಮ ಹಕ್ಕು ಮತ್ತು ಸೌಲಭ್ಯ ಪಡೆದುಕೊಳ್ಳಲು ಸಮಾಜ ಬಾಂಧವರು ಯಾವುದೇ ತ್ಯಾಗಕ್ಕೂ ಸಿದ್ದರಿರಬೇಕು’ ಎಂದು ಕರೆ ನೀಡಿದರು.
ಸಮಾಜದ ಪ್ರಮುಖರಾದ ನಾಗಪ್ಪ ಕಟ್ಟಿಮನಿ, ವೆಂಕಟೇಶ ಅಮ್ಮಾಪುರ, ನಾಗೇಶ ಪೂಜಾರಿ, ರವಿ ಪೂಜಾರಿ ಇತರರಿದ್ದರು. ಇದೇ ವೇಳೆ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಭೀಮಣ್ಣ ಬೋವಿ (ಗೌರವಾಧ್ಯಕ್ಷ), ನಾಗಪ್ಪ ಜಾಲಹಳ್ಳಿ (ಅಧ್ಯಕ್ಷ), ಲಚ್ಚಪ್ಪ ಭೋವಿ (ಉಪಾಧ್ಯಕ್ಷ), ತಿಮ್ಮಣ್ಣ ಪೂಜಾರಿ (ಪ್ರಧಾನ ಕಾರ್ಯದರ್ಶಿ), ರಾಮಸ್ವಾಮಿ ಬೋವಿ (ಕಾರ್ಯದರ್ಶಿ), ಹಣಮಂತ ದಂಡಗಲ್ (ಸಹ ಕಾರ್ಯದರ್ಶಿ), ನಾಗಪ್ಪ ಕೊದ್ದಡ್ಡಿ (ಸಂಘಟನಾ ಕಾರ್ಯದರ್ಶಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.