ದಾವಣಗೆರೆ: ಕಾರ್ಮಿಕರ ಭವಿಷ್ಯನಿಧಿ ಯೋಜನೆ ಪಿಂಚಣಿದಾರರ ಬೇಡಿಕೆಗಳ ಈಡೇರಿಕೆಗಾಗಿ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಬೆಳಗಾವಿಯ ಭವಿಷ್ಯನಿಧಿ ಪಿಂಚಣಿದಾರರ ಮಹಾಮಂಡಳದ ಅಧ್ಯಕ್ಷ ಬಿ.ಎಸ್. ಇಂಗಳೆ ತಿಳಿಸಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಕಾರ್ಮಿಕರ ಭವಿಷ್ಯನಿಧಿ ಯೋಜನೆ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘ~ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ನಿರಂತರ ಹೋರಾಟದ ಮೂಲಕ ಒತ್ತಡ ತರಲಾಗಿದೆ. ನ್ಯಾಯಾಂಗದ ಮೂಲಕವೂ ಪ್ರಯತ್ನ ಮುಂದುವರಿಸಲಾಗುವುದು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.
ಮಾಸಿಕ ಕನಿಷ್ಠ ರೂ 5 ಸಾವಿರ ಪಿಂಚಣಿ ನಿಗದಿಪಡಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಸೂಚ್ಯಂಕದ ಆಧಾರದ ಮೇಲೆ ಪಿಂಚಣಿ ನಿಗದಿಪಡಿಸಿದಂತೆ, ಭವಿಷ್ಯನಿಧಿ ಯೋಜನೆಯಡಿ ಬರುವ ಪಿಂಚಣಿದಾರರಿಗೂ ಕಾಲಕಾಲಕ್ಕೆ ಪಿಂಚಣಿ ಪರಿಷ್ಕರಣೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಪ್ರಸ್ತುತ ರೂ 1,600 ಪಿಂಚಣಿ ದೊರೆಯುತ್ತಿದೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಈ ಹಣ ಸಾಕಾಗುವುದಿಲ್ಲ. ಅದನ್ನು ಹೆಚ್ಚಿಸುವಂತೆ ಒಂದೂವರೆ ವರ್ಷದಿಂದ ಹೋರಾಟ ನಡೆಸಿರುವುದಾಗಿ ತಿಳಿಸಿದರು.