ಉಡುಪಿ: `ನಗರದ ಎಂ.ಜಿ.ಎಂ ಕಾಲೇಜಿನ ಎದುರು ರಂಗರಾವ್ ಅವರು ಕೊಡುಗೆಯಾಗಿ ನೀಡಿದ್ದ ಭೂಮಿಯಲ್ಲಿ ದಲಿತರು ವಾಸಿಸುತ್ತಿದ್ದು, ಈ ಭೂಮಿ ಲಪಟಾಯಿಸಲು ಸ್ಥಳೀಯ ವಕೀಲರು ಸಂಚು ನಡೆಸಿದ್ದಾರೆ. ಅವರಿಗೆ ದಲಿತ ಮುಖಂಡರೊಬ್ಬರು ಸಹಕಾರ ನೀಡುತ್ತಿದ್ದಾರೆ~ ಎಂದು ಆರೋಪಿಸಿರುವ ಸ್ಥಳೀಯ ದಲಿತ ನಿವಾಸಿಗಳು, ಭೂ ಕಬಳಿಗೆ ಮುಂದಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಹರಿಜನೋದ್ಧಾರ ಕಾರ್ಯಕ್ರಮದಡಿ ಕುದ್ಮುಲ್ ರಂಗರಾವ್ ಅವರು 50 ದಲಿತ ಕುಟುಂಬಗಳಿಗೆ ಎಂಜಿಎಂ ಕಾಲೇಜಿನ ಎದುರು ಇದ್ದ ಭೂಮಿಯನ್ನು ವರ್ಷಗಳ ಹಿಂದೆಯೇ ನೀಡಿದ್ದರು. ಆದರೆ ಅಲ್ಲಿ ವಾಸವಾಗಿರುವ ಯಾರಿಗೂ ಈವರೆಗೆ ಹಕ್ಕುಪತ್ರ ಲಭಿಸಿಲ್ಲ. ಈ ಸ್ಥಿರಾಸ್ತಿ ವಿವಾದ ಕುಂದಾಪುರ ಭೂ ನ್ಯಾಯಮಂಡಳಿಯಲ್ಲಿದೆ ಎಂದು ಪ್ರತಿಭಟನಾಕಾರರು ಗಮನ ಸೆಳೆದಿದ್ದಾರೆ.
ಇಬ್ಬರು ವಕೀಲರು ಸರ್ಕಾರದ ಅಧೀನದಲ್ಲಿ ಬರುವ ಈ ಜಾಗದಲ್ಲಿ ಹಳೆ ಕಟ್ಟಡಗಳ ಸಾಮಗ್ರಿ ಅಂಗಡಿ ಮತ್ತು ಗುಜರಿ ಅಂಗಡಿಗಳ ಜಾಹಿರಾತು ಫಲಕಗಳಿಗೆ ಲೀಸ್ ನೀಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ. ಈ ಭೂ ಪ್ರಕರಣವನ್ನು ಶೀಘ್ರದಲ್ಲೇ ಬಗೆಹರಿಸಬೇಕು, ದಲಿತ ಕುಟುಂಬಗಳಿಗೆ ಹಕ್ಕುಪತ್ರ ದೊರಕಿಸಿಕೊಡಬೇಕು~ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.
ಸುಧಾಕರ ಮಾಸ್ತರ್, ಭಾಸ್ಕರ್ ಮಾಸ್ತರ್, ಶೇಖರ ಪಣಿಯಾಡಿ, ಗಂಗಾ, ಲಲಿತಾ, ಸಿ.ಗೋಪಾಲ, ರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.