ಚಳ್ಳಕೆರೆ: ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಸಿಕೊಂಡು ಜೀವನದುದ್ದಕ್ಕೂ ಹೋರಾಟ ಮಾಡಿದ ದಾರ್ಶನಿಕರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ. ನೀಲಮ್ಮ ಸಲಹೆ ನೀಡಿದರು.
ಚಳ್ಳಕೆರೆ ಪಟ್ಟಣದ ವಾಸವಿ ಮಹಲ್ನಲ್ಲಿ ನೀಲಾದ್ರಿ ಮಹಿಳಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನಕ-ಪುರಂದರ ಆರಾಧನೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಸಮಾಜದ ಸ್ವಾಸ್ಥ್ಯ ಕಾಪಾಡುತ್ತಾ ಶತಮಾನಗಳಿಂದಲೂ ಹೋರಾಟ ನಡೆಸುತ್ತಾ ಬಂದ ದಾರ್ಶನಿಕರ ಜೀವನ ಚರಿತ್ರೆಯನ್ನು ಅರಿಯಬೇಕು ಎಂದು ಅವರು ಹೇಳಿದರು.ಪುರಸಭೆ ಸದಸ್ಯೆ ಪಾರ್ವತಮ್ಮ ಮಂಡಿಮಠ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿದ್ವಾಂಸ ಬಿ. ಗುರುಸಿದ್ದಪ್ಪ, ನೃತ್ಯ ನಿಕೇತನ ಶಾಸ್ತ್ರೀಯ ನೃತ್ಯ ಶಾಲೆಯ ಸುಧಾಮೂರ್ತಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಆರ್. ಮಲ್ಲೇಶಪ್ಪ, ಆರ್. ವಾಸುದೇವರಾವ್, ಎಂ.ಆರ್. ರವಿಪ್ರಸಾದ್, ದತ್ತ ಗಾಯಿತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ನಳಿನಾ ಬಾಬು, ಮಂಜುಳಾ ನಾಗರಾಜ್, ಕಲ್ಪನಾ ಅಶೋಕ್, ಸೀತಾಲಕ್ಷ್ಮಿ ವಾದಿರಾಜ್, ವಿಷ್ಣುಮೂರ್ತಿರಾವ್ ಮತ್ತಿತರರು ಉಪಸ್ಥಿತರಿದ್ದರು.