ಚಿತ್ರದುರ್ಗ: ವಿದೇಶಿ ಕ್ರೀಡೆಗಳ ಹಾವಳಿಯಿಂದಾಗಿ ಸ್ವದೇಶಿ ಕ್ರೀಡೆಗಳು ನಶಿಸುತ್ತಿವೆ ಎಂದು ಶಾಸಕ ಎಸ್.ಕೆ. ಬಸವರಾಜನ್ ಅಭಿಪ್ರಾಯಪಟ್ಟರು.ನಗರದಲ್ಲಿ ಶನಿವಾರ ಸರಸ್ವತಿ ಕಾನೂನು ಕಾಲೇಜು ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪುರುಷರ ಹೊನಲು-ಬೆಳಕಿನ ಕಬಡ್ಡಿ ಟೂರ್ನಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದೇಶಿ ಕ್ರೀಡೆಗಳಿಗೆ ನೀಡುವ ಮಾನ್ಯತೆ ಮತ್ತು ಸ್ಥಾನಮಾನವನ್ನು ದೇಸಿ ಕ್ರೀಡೆಗಳಿಗೂ ನೀಡಬೇಕು. ಯುವಜನತೆಯನ್ನು ಅವುಗಳತ್ತ ಆಕರ್ಷಿಸಲು ಸರ್ಕಾರ ಯೋಜನೆ ರೂಪಿಸಬೇಕು. ಕ್ರೀಡೆ ಎಂದರೆ ಕೇವಲ ಕ್ರಿಕೆಟ್, ಫುಟ್ಬಾಲ್ ಮಾತ್ರವಲ್ಲ. ಇಲ್ಲಿ ವಿದೇಶಿ ಕ್ರೀಡೆಗಳು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿವೆ. ದೇಶದಲ್ಲಿ ತಲೆ ತಲಾಂತರಗಳಿಂದ ಬಂದಿರುವ ದೇಶಿ ಕ್ರೀಡೆಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ಕಬಡ್ಡಿ ಪುರಾತನ ಆಟವಾಗಿದ್ದು, ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು. ರಾಜಕೀಯದಲ್ಲಿನ ಸೋಲನ್ನು ಕ್ರೀಡಾ ಮನೋಭಾವದ ರೀತಿಯಲ್ಲಿ ಸ್ವೀಕರಿಸಿದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲ ಸುಧಾದೇವಿ ಮಾತನಾಡಿ, ಕಬಡ್ಡಿಯನ್ನು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೇರಿಸುವ ಮೂಲಕ ಉತ್ತೇಜನ ನೀಡಬೇಕು ಎಂದು ಅಭಿಪ್ರಾಯಪಟ್ಟರು.ನೋಟರಿ ಚಲ್ಮೇಶ್, ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಕಾಲಿದ್-ಬಿ-ಖಾನ್ ಭಾಗವಹಿಸಿದ್ದರು.