ದಾವಣಗೆರೆ: ನಗರದ ಬನಶಂಕರಿ ಬಡಾವಣೆ ಸಮೀಪ ಸರ್ವೀಸ್ ರಸ್ತೆ ಇಲ್ಲದಿರುವುದನ್ನು ವಿರೋಧಿಸಿ ಬನಶಂಕರಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಭಾನುವಾರ ರಾಷ್ಟ್ರೀಯ ಹೆದ್ದಾರಿ -4ನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ನಗರ ಪ್ರವೇಶಿಸುವ ಚನ್ನಗಿರಿ ರಸ್ತೆ ಅಂಡರ್ಪಾಸ್ನಿಂದ ಶಾಮನೂರಿನವರೆಗೆ ಸರಿಯಾದ ಸರ್ವೀಸ್ ರಸ್ತೆ ಇಲ್ಲ. ಈ ಮಾರ್ಗದಲ್ಲಿ ಹೈಟೆನ್ಷನ್ ವಿದ್ಯುತ್ ಲೈನುಗಳು ಹಾದುಹೋಗಿವೆ. ಅಲ್ಲದೆ ವಿದ್ಯುತ್ ಕಂಬಗಳಿಗೆ ಸಾಕಷ್ಟು ಬಾರಿ ವಾಹನಗಳು ಡಿಕ್ಕಿ ಹೊಡೆದಿವೆ. ಅನೇಕ ಸಾವು ನೋವುಗಳೂ ಸಂಭವಿಸಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು 45 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಮ್ಯಾಥ್ಯೂ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಫೆ. 22ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಪಾಲಿಕೆ ಸದಸ್ಯ ಸಂಕೋಳ್ ಚಂದ್ರಶೇಖರಪ್ಪ, ಮರುಳಸಿದ್ದಯ್ಯ, ಶಶಿಕುಮಾರ್, ಮುಕುಂದ್,ಬಡಾವಣೆಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.