ಅರಸೀಕೆರೆ: ತಾಲ್ಲೂಕಿನ ಕಲ್ಲುಸಾದರಹಳ್ಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ಕೆಪಿಟಿಸಿಎಲ್ನ ಉಪ ಕೇಂದ್ರ ಕಚೇರಿಗೆ ಭಾನುವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ್ ಮುಂತಾದವರ ನೇತೃತ್ವದಲ್ಲಿ ಕೇಂದ್ರದ ಮುಂದೆ ಜಮಾಯಿಸಿದ ಗ್ರಾಮಸ್ಥರು ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಕಲ್ಲುಸಾದರಹಳ್ಳಿಯಲ್ಲಿಯೇ ಉಪ ಕೇಂದ್ರವಿದ್ದರೂ ಗ್ರಾಮ ಮತ್ತು ಸುತ್ತ-ಮುತ್ತಲ ಹತ್ತಾರು ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಕ್ರಮ ಜರುಗಿಸುವ ತನಕ ಪ್ರತಿಭಟನೆ ಕೊನೆಗೊಳಿಸುವುದಿಲ್ಲ ಪಟ್ಟುಹಿಡಿದರು.
ಅರಸೀಕೆರೆ ಮೊದಲೇ ಬರದ ಛಾಯೆಗೆ ಸಿಲುಕಿದ್ದು, ರೈತಸಂಕಷ್ಟದಲ್ಲಿದೆ. ರೈತರು ಬೆಳೆಗಳಿಗೆ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ವಿದ್ಯುತ್ ಸರಬರಾಜಿನಲ್ಲಿ ಸತತ ವ್ಯತ್ಯಯದಿಂದಾಗಿ ಪಂಪ್ಸೆಟ್ ಇದ್ದರೂ ನೀರು ಹಾಯಿಸಲಾಗದ ಸ್ಥಿತಿ ಇದೆ~ ಎಂದು ರೈತರು ದೂರಿದರು.
ಬಾಣಾವರ ಎಇಇ ಗಣೇಶ್, ಡಿ.ಎಂ.ಕುರ್ಕೆ ಶಾಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.