ಬೆಳಗಾವಿ: ಸೇನೆ ಸೇರಬೇಕೆಂಬ ಕನಸು ಕಾಣುತ್ತಿದ್ದ ಯುವಕರ ಪಡೆ ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯ ಮೈದಾನಕ್ಕೆ ಬುಧವಾರ ಬೆಳಗಿನಜಾವ ಲಗ್ಗೆಯಿಟ್ಟಿತ್ತು. ರಾಜ್ಯದ ಮೂಲೆ- ಮೂಲೆಗಳಿಂದ ಕನಸು ಹೊತ್ತು ನಗರಕ್ಕೆ ಬಂದಿದ್ದ ಸಾವಿರಾರು ಯುವಕರು ಅದೃಷ್ಟ ಪರೀಕ್ಷೆ ಮಾಡಿಕೊಂಡರು.
ಭಾರತೀಯ ಭೂ ಸೇನೆಗೆ ನೇಮಕ ಮಾಡಿಕೊಳ್ಳಲು ನಗರದ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಬುಧವಾರ ಆರಂಭಗೊಂಡ ಭರ್ತಿ ರ್ಯಾಲಿಯಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಯುವಕರು ಪಾಲ್ಗೊಂಡು ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗಾಗಿ ಬುಧವಾರ ನಡೆದ ದೈಹಿಕ ಪರೀಕ್ಷೆಯಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಯುವಕರು ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿಕೊಂಡರು.
ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆ ಮೈದಾನದಲ್ಲಿ ಸೆ.20ರ ವರೆಗೂ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸೇನಾ ಭರ್ತಿ ರ್ಯಾಲಿಯು ನಡೆಯಲಿದೆ.