ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥ: ಸೇನಾ ನೇಮಕಾತಿಯ ಹೊಸಶಕೆ

Last Updated 29 ಜೂನ್ 2022, 23:30 IST
ಅಕ್ಷರ ಗಾತ್ರ

ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ಯುವಕರಿಗೆ ಅವಕಾಶ ಕಲ್ಪಿಸುವ ‘ಅಗ್ನಿಪಥ’ ಎಂಬ ಹೊಸ ನೇಮಕಾತಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ‘ಅಗ್ನಿವೀರ’ ಎಂದು ಕರೆಯಲಾಗುತ್ತದೆ.

ಅಗ್ನಿಪಥ, ದೇಶಭಕ್ತಿ ಪ್ರೇರಿತರಾದ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಇದು ಸೇನೆಯ ಮೂರು ಸೇವೆಗಳ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ) ಮಾನವ ಸಂಪನ್ಮೂಲ ನೀತಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಲು ಸರ್ಕಾರ ಪರಿಚಯಿಸಿರುವ ಪ್ರಮುಖ ರಕ್ಷಣಾ ನೀತಿ ಸುಧಾರಣೆಯಾಗಿದ್ದು, ತ್ವರಿತಗತಿಯಲ್ಲಿ ಅನುಷ್ಠಾನವಾಗುತ್ತಿದೆ.

ಯೋಜನೆಯ ವಿವರಗಳು

l ಅಗ್ನಿಪಥ ಯೋಜನೆಯಡಿಯಲ್ಲಿ, ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ವಿವಿಧ ಸೇನಾ ಪಡೆಗಳಲ್ಲಿ ಸಂಬಂಧಿತ ಸೇವಾ ಕಾಯಿದೆಗಳ ಅಡಿಯಲ್ಲಿ ದಾಖಲಿಸಲಾಗುತ್ತದೆ.

l ಈ ಮೂಲಕ ಸಶಸ್ತ್ರ ಪಡೆಗಳಲ್ಲಿ ಪ್ರಸಕ್ತ ಅಸ್ತಿತ್ವದಲ್ಲಿರುವ ಶ್ರೇಣಿಗಳಿಗಿಂತ ಭಿನ್ನವಾದ ಒಂದು ವಿಶಿಷ್ಟ ಶ್ರೇಣಿ ಯನ್ನು ರೂಪಿಸಲಾಗುತ್ತದೆ. ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಅಗ್ನಿವೀರರಿಗೆ ಆ ಸಂದರ್ಭದಲ್ಲಿನ ಸಾಂಸ್ಥಿಕ ಅಗತ್ಯತೆಗಳು ಮತ್ತು ಕಾಲಕಾಲಕ್ಕೆ ಸಶಸ್ತ್ರ ಪಡೆಗಳು ಪ್ರಕಟಿಸಿದ ನೀತಿಗಳ ಆಧಾರದ ಮೇಲೆ ಆ ಪಡೆಗಳಲ್ಲಿ ಶಾಶ್ವತ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

l ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ತೋರಿಸಿದ ಕಾರ್ಯಕ್ಷಮತೆ ಮತ್ತು ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಕೇಂದ್ರೀಕೃತ ರೀತಿಯಲ್ಲಿ ಅಗ್ನಿವೀರರ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ. ಪ್ರತಿ ನಿರ್ದಿಷ್ಟ ತಂಡದಿಂದ ಶೇ 25 ರಷ್ಟು ಅಗ್ನಿವೀರರನ್ನು ಸಶಸ್ತ್ರ ಪಡೆಗಳ ನಿಯಮಿತ ಕೇಡರ್‌ಗೆ ದಾಖಲಿಸಲಾಗುತ್ತದೆ.

l ಆಯ್ಕೆಯು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ವ್ಯಾಪ್ತಿಯಾಗಿದ್ದು, ಈ ವರ್ಷ 46,000 ಅಗ್ನಿವೀರರನ್ನು ನೇಮಿಸಿಕೊಳ್ಳಲಾಗುವುದು.

l ಮಾನ್ಯತೆ ಪಡೆದ ತಾಂತ್ರಿಕ ಸಂಸ್ಥೆಗಳಾದ ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನಿಂದ ವಿಶೇಷ ರ‍್ಯಾಲಿ ( rallies)ಗಳು ಮತ್ತು ಕ್ಯಾಂಪಸ್ ಸಂದರ್ಶನಗಳೊಂದಿಗೆ ಎಲ್ಲಾ ಮೂರು ಸೇವೆಗಳಿಗೆ ಆನ್‌ಲೈನ್ ಮೂಲಕ ನೋಂದಣಿ ಕೈಗೊಳ್ಳಲಾಗುತ್ತದೆ.

l ದಾಖಲಾತಿಯು ‘ಆಲ್ ಇಂಡಿಯಾ ಆಲ್ ಕ್ಲಾಸ್’ (ಸಂಪೂರ್ಣ ಭಾರತದ ಸಮಗ್ರ ವರ್ಗಗಳು ತತ್ವದ ) ಆಧಾರದ ಮೇಲೆ, ಅಂದರೆ ಯಾವುದೇ ಜಾತಿ, ಮತ, ಧರ್ಮ, ಲಿಂಗ, ವರ್ಗಗಳ ಬೇಧವಿಲ್ಲದೇ ನಡೆಯುತ್ತದೆ. ಈ ಹುದ್ದೆಗೆ ಅರ್ಹ ವಯಸ್ಸು 17 ವರ್ಷ 6 ತಿಂಗಳಿನಿಂದ 21 ವರ್ಷಗಳ ವ್ಯಾಪ್ತಿಯಲ್ಲಿರುತ್ತದೆ.

l ಕಳೆದ ಎರಡು ವರ್ಷಗಳಲ್ಲಿ ಸೇನಾ ನೇಮಕಾತಿ ಕೈಗೊಳ್ಳಲು ಸಾಧ್ಯವಾಗಿಲ್ಲದ ಕಾರಣ ಉದ್ದೇಶಿತ ನೇಮಕಾತಿಗೆ ಒಂದು ಬಾರಿ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಆ ಪ್ರಕಾರ, 2022 ಕ್ಕೆ ಅಗ್ನಿಪಥ ಯೋಜನೆಗೆ ನೇಮಕಾತಿ ಪ್ರಕ್ರಿಯೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ.

l 6 ತಿಂಗಳ ಕಾಲದ ತರಬೇತಿ ನೀಡಿದ ಬಳಿಕ ಮೂರುವರೆ ವರ್ಷಗಳ ಕಾಲ ಸೇವೆಗೆ ನಿಯೋಜಿಸಲಾಗುತ್ತದೆ.

l ಅಗ್ನಿವೀರರನ್ನು ಆಯಾ ವಿಭಾಗಗಳಿಗೆ ಅನ್ವಯವಾಗುವಂತೆ ಸಶಸ್ತ್ರ ಪಡೆಗಳಲ್ಲಿ ದಾಖಲಾತಿ ಗಾಗಿ ನಿಗದಿಪಡಿಸಿದ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕು.

ಶೈಕ್ಷಣಿಕ ಅರ್ಹತೆ

l ವಿವಿಧ ವಿಭಾಗಗಳಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಕನಿಷ್ಟ ಶೈಕ್ಷಣಿಕ ಅರ್ಹತೆಗಳನ್ನೇ ಅಗ್ನಿವೀರರ ದಾಖಲಾತಿಗಾಗಿ ಪರಿಗಣಿಸಲಾಗುತ್ತದೆ. ಉದಾಹರಣೆಗೆ: ಸಾಮಾನ್ಯ ಸೇವಾ (ಜಿಡಿ) ಸೈನಿಕನಿಗೆ ವಿದ್ಯಾರ್ಹತೆ 10ನೇ ತರಗತಿ ಇದ್ದು ಇಲ್ಲೂ ಹಾಗೆಯೇ ಮುಂದುವರಿಯುತ್ತದೆ.

ಅಗ್ನಿವೀರರು

l ಈ ಯೋಜನೆಯ ಅಡಿಯಲ್ಲಿ ಸಂಬಂಧಿತ ಸೇವಾ ಕಾಯಿದೆಗಳ ಅಡಿಯಲ್ಲಿ ಸೇರಿಕೊಳ್ಳುವ ಯುವಪಡೆಗಳನ್ನು ಅಗ್ನಿವೀರರು (Agniveers) ಎಂದು ಕರೆಯಲಾಗುತ್ತದೆ.

l ಅಗ್ನಿವೀರರಿಗೆ ಮೂರು ಸೇವೆಗಳಲ್ಲಿ ಅನ್ವಯವಾಗು
ವಂತೆ, ವಿವಿಧ ಇತರ ಭತ್ಯೆಗಳೊಂದಿಗೆ ನಿಗದಿ ಪಡಿಸಿದ ಮಾಸಿಕ ಪ್ಯಾಕೇಜ್‌ನ ವೇತನ ನೀಡಲಾಗುತ್ತದೆ.

l ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಂಡ ನಂತರ ಅಗ್ನಿವೀರರಿಗೆ ಒಂದು ಬಾರಿ ‘ಸೇವಾನಿಧಿ’
ಪ್ಯಾಕೇಜ್ ಪಾವತಿಸಲಾಗುವುದು.

l ಈ ‘ಸೇವಾ ನಿಧಿ’ಯು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ. ಆದರೆ ಇವರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಅರ್ಹತೆ ಇರುವುದಿಲ್ಲ. ಅಗ್ನಿವೀರರಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅವರ ಸೇವಾ ಅವಧಿಯಲ್ಲಿರುವವರೆಗೆ ₹48 ಲಕ್ಷ ಮೊತ್ತದ ಉಚಿತ ಜೀವ ವಿಮಾ ರಕ್ಷಣೆ ಒದಗಿಸಲಾಗುತ್ತದೆ.

l ರಾಷ್ಟ್ರಸೇವೆಯ ಈ ಅವಧಿಯಲ್ಲಿ ಅಗ್ನಿವೀರರು ಮಿಲಿಟರಿ ಕೌಶಲಗಳಾದ ಶಿಸ್ತು, ದೈಹಿಕ ಸಾಮರ್ಥ್ಯ, ನಾಯಕತ್ವದ ಗುಣಗಳು, ಧೈರ್ಯ ಮತ್ತು ದೇಶಭಕ್ತಿ ಮುಂತಾದ ಮೌಲ್ಯಗಳ ಸಮರ್ಥ ತರಬೇತಿ ಪಡೆದಿರುತ್ತಾರೆ.

l ನಾಲ್ಕು ವರ್ಷಗಳ ಈ ಅವಧಿಯ ಬಳಿಕ ಅಗ್ನಿವೀರರು ನಾಗರಿಕ ಸಮಾಜಕ್ಕೆ ಮರಳಬೇಕಿರುತ್ತದೆ ಮತ್ತು ಅಲ್ಲಿ ಪಡೆದ ತರಬೇತಿಯ ಫಲವಾಗಿ ಅವರು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಅಪಾರ ಕೊಡುಗೆಗಳನ್ನು ನೀಡುವ ಅವಕಾಶವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT