ನವದೆಹಲಿ: ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರಿಗೆ ಕೇಂದ್ರ ಸರ್ಕಾರವು ‘ವೈ–ಪ್ಲಸ್’ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಮಾಧವಿ ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿ, ಭದ್ರತೆ ಒದಗಿಸುವಂತೆ ಶಿಫಾರಸು ಮಾಡಿದ ನಂತರ ಈ ಸೌಲಭ್ಯ ಒದಗಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ವಿಐಪಿ ಭದ್ರತಾ ಘಟಕವು ಭದ್ರತೆ ನೀಡಲಿದೆ. ಶಸ್ತ್ರಸಜ್ಜಿತ ನಾಲ್ಕರಿಂದ ಐದು ಕಮಾಂಡೊಗಳು ದಿನದ 24 ಗಂಟೆಯೂ ಮಾಧವಿ ಅವರಿಗೆ ತೆಲಂಗಾಣದಲ್ಲಿ ಭದ್ರತೆ ಒದಗಿಸಲಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಮಾಧವಿ ಲತಾ ಸ್ಪರ್ಧಿಸಿದ್ದಾರೆ.