ನವದೆಹಲಿ: ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಾಗಿ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಅವರಿಗೆ 48 ಗಂಟೆ ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗವು ಮಂಗಳವಾರ ನಿರ್ಬಂಧ ಹೇರಿದೆ.
ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಆಯೋಗ ನಿಷೇಧ ಹೇರಿದ ಮೊದಲ ಪ್ರಕರಣ ಇದಾಗಿದೆ.
‘ಘನತೆಯಿಲ್ಲದ, ಅನಾಗರಿಕ ಹಾಗೂ ಅಸಭ್ಯ’ ಹೇಳಿಕೆಯ ಸಂಬಂಧ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗವು ಕಳೆದ ಮಂಗಳವಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಅದಕ್ಕೆ ಸುರ್ಜೇವಾಲಾ ನೀಡಿದ್ದ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಸುರ್ಜೇವಾಲಾ ಅವರ ಹೇಳಿಕೆ, ಆಯೋಗವು ಕಳೆದ ತಿಂಗಳು ಪಕ್ಷಗಳಿಗೆ ವಿತರಿಸಿದ್ದ ನೀತಿ ಸಂಹಿತೆ ಮತ್ತು ಸಲಹೆಗಳ ಸ್ಪಷ್ಟ ಉಲ್ಲಂಘನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪ್ರಕಟಣೆ ತಿಳಿಸಿದೆ.