ಭದೋಹಿ: ಇಲ್ಲಿನ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (ಎಸ್ಪಿ) ಉತ್ತರ ಪ್ರದೇಶದಲ್ಲಿ ಟಿಎಂಸಿ ಮಾದರಿಯ ರಾಜಕೀಯಕ್ಕೆ ಮುನ್ನುಡಿ ಬರೆಯಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಮೋದಿ, 'ಟಿಎಂಸಿ ರಾಜಕೀಯವೆಂದರೆ, ಹಿಂದೂಗಳ ಹತ್ಯೆ, ದಲಿತರು–ಆದಿವಾಸಿಗಳ ಮೇಲೆ ದೌರ್ಜನ್ಯ, ಮಹಿಳೆಯರಿಗೆ ಕಿರುಕುಳ ಎಂದರ್ಥ. ಇದರಿಮದಾಗಿಯೇ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಾಕಷ್ಟು ನಾಯಕರು ಕೊಲೆಯಾಗಿದ್ದಾರೆ. ಅಲ್ಲಿನ ಟಿಎಂಸಿ ಶಾಸಕರು, ಹಿಂದೂಗಳನ್ನು ಗಂಗಾ ನದಿಯಲ್ಲಿ ಮುಳುಗಿಸಿ ಕೊಲ್ಲುವುದಾಗಿ ಹೇಳುತ್ತಾರೆ' ಎಂದು ದೂರಿದ್ದಾರೆ.
'ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷಗಳಿಗೆ ತಮ್ಮ ಠೇವಣಿ ಉಳಿಸಿಕೊಳ್ಳುವುದೂ ಕಷ್ಟವಾಗಿದೆ. ಹಾಗಾಗಿ, ಅವರು ಭದೋಹಿಯಲ್ಲಿ ರಾಜಕೀಯ ಪ್ರಯೋಗ ಮಾಡುತ್ತಿದ್ದಾರೆ. ಬಂಗಾಳದಲ್ಲಿನ ಟಿಎಂಸಿ ರಾಜಕೀಯದ ಮಾದರಿಯನ್ನು ಉತ್ತರ ಪ್ರದೇಶದಲ್ಲಿ ಪರಿಚಯಿಸಲು ನೋಡುತ್ತಿದ್ದಾರೆ' ಎಂದು ಹೇಳಿದ್ದಾರೆ.