ಶಿಮ್ಲಾ: ‘ಇದು ನಿಮ್ಮ ಪೂರ್ವಿಕರ ಆಸ್ತಿಯಲ್ಲ. ನನ್ನನ್ನು ಬೆದರಿಸಿ, ಓಡಿಸಲು ಸಾಧ್ಯವಿಲ್ಲ’– ಹೀಗೆಂದು ನಟಿ, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರು ರಾಜ್ಯ ಸಚಿವ ವಿಕ್ರಮಾದಿತ್ಯ ಸಿಂಗ್ ಅವರ ವಿರುದ್ಧ ಗುರುವಾರ ಕಟುಶಬ್ದಗಳಿಂದ ವಾಗ್ದಾಳಿ ನಡೆಸಿದರು.
ಕಂಗನಾ ಅವರನ್ನು ‘ವಿವಾದಗಳ ರಾಣಿ’ ಎಂದು ವಿಕ್ರಮಾದಿತ್ಯ ಟೀಕಿಸಿದ್ದರು. ಮಂಡಿಯಲ್ಲಿ ಚುನಾವಣಾ ರ್ಯಾಲಿ ನಡೆಸಿದ ಅವರು ವಿಕ್ರಮಾದಿತ್ಯ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಇದು ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ. ಚಹಾ ಮಾರುತ್ತಿದ್ದ ಪುಟ್ಟ ಬಡ ಹುಡುಗ ದೇಶದ ಮಹಾನ್ ನಾಯಕರಾದ ಮತ್ತು ಜನರ ಪ್ರಧಾನ ಸೇವಕರಾಗಿರುವ ದೇಶ’ ಎಂದರು.
ಕಂಗನಾ ಗೋಮಾಂಸ ಸೇವಿಸುತ್ತಾರೆ ಎಂದು ಈಚೆಗಷ್ಟೇ ವಿಕ್ರಮಾದಿತ್ಯ ಸಿಂಗ್ ಆರೋಪಿಸಿದ್ದರು. ಇದನ್ನು ಅಲ್ಲಗಳೆದ ಕಂಗನಾ, ‘ದೆಹಲಿಯಲ್ಲಿ ದೊಡ್ಡ ಪಪ್ಪು ಇದ್ದಾರೆ . ಹಿಮಾಚಲ ಪ್ರದೇಶದಲ್ಲಿರುವ ಛೋಟಾ ಪಪ್ಪು ಇದ್ದಾರೆ. ನಾನು ಗೋಮಾಂಸ ಸೇವಿಸುವುದಾಗಿ ಛೋಟಾ ಪಪ್ಪು ಆರೋಪಿಸಿದ್ದಾರೆ. ಏಕೆ ಈ ಕುರಿತು ಸಾಕ್ಷಿ ತೋರಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ನಾನು ಆಯುರ್ವೇದ ಮತ್ತು ಯೋಗಿಕ್ ಜೀವನಶೈಲಿ ಅನುಸರಿಸುತ್ತೇನೆ’ ಎಂದು ಹೇಳಿದ್ದಾರೆ.
ವಿಕ್ರಮಾದಿತ್ಯ ಸಿಂಗ್ ಅವರು ಮೊದಲನೇ ಶ್ರೇಯಾಂಕದ ಸುಳ್ಳುಕೋರ. ದೊಡ್ಡ ಪಪ್ಪು ನಾರಿ ಶಕ್ತಿಯನ್ನು ನಾಶಪಡಿಸುವ ಮಾತಗಳನ್ನು ಆಡುವಾಗ ಸಣ್ಣ ಪಪ್ಪುವಿನಿಂದ ಬೇರೆ ಏನನ್ನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ.
‘ನಾನು ನನ್ನ ಪೋಷಕರ ಸಹಾಯವಿಲ್ಲದೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದೇನೆ. ಜನರ ಸೇವೆ ಮಾಡುವ ಸಲುವಾಗಿ ರಾಜಕಾರಣ ಪ್ರವೇಶಿಸಿದೆ’ ಎಂದರು.
‘ಚಿತ್ರರಂಗದ ಸಹೋದ್ಯೋಗಿಗಳನ್ನೂ ಅವರು ಈ ವೇಳೆ ಟೀಕಿಸಿದರು. ಬಾಲಿವುಡ್ನ ಪರಿವಾರವಾದಿ, ವಂಶವಾದಿ ನಟರು ನನ್ನನ್ನು ಬೆದರಿಸಲು ಪ್ರಯತ್ನಿಸಿದರು. ನಾನು ದೇಶದ ಜನರ ಬೆಂಬಲದೊಂದಿಗೆ ನನ್ನ ಸಿನಿಮಾಗಳಲ್ಲಿ ಹೀರೊಗಳನ್ನೇ ತೆಗೆದುಹಾಕಿದೆ. ಮತ್ತೊಬ್ಬ ಪಪ್ಪು ಉದ್ಧವ್ ಠಾಕ್ರೆಯೂ (ಶಿವಸೇನಾ ಯುಬಿಟಿ ಮುಖ್ಯಸ್ಥ) ನನ್ನನ್ನು ಬೆದರಿಸಿದರು. ನನ್ನ ಮನೆಗೆ ಹಾನಿ ಮಾಡಿದರು. ಜನರ ಬೆಂಬಲದಿಂದಲೇ ನಾನು ಈಗ ಇಲ್ಲಿ ನಿಂತಿದ್ದೇನೆ’ ಎಂದರು.
ಮಂಡಿ ಕ್ಷೇತ್ರದಲ್ಲಿ ವಿಕ್ರಮಾದಿತ್ಯ ಸಿಂಗ್ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸುವ ಕುರಿತು ಮಾತುಕತೆಗಳ ನಡೆಯುತ್ತಿರುವ ವೇಳೆಯೇ ಈ ದಾಳಿ ಪ್ರತಿದಾಳಿ ನಡೆಯುತ್ತಿವೆ.
ಜನರು ನನ್ನನ್ನು ಗೆಲ್ಲಿಸಿದರೆ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಪುರುಷರಿಗೆ ಸವಾಲು ಒಡ್ಡುತ್ತಾರೆ ಎಂಬ ಉದಾಹರಣೆಯನ್ನು ಸಮಾಜದಲ್ಲಿ ಸ್ಥಾಪಿಸುತ್ತೇನೆಕಂಗನಾ ರನೌತ್ ನಟಿ ಬಿಜೆಪಿ ಅಭ್ಯರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.