ಬಳ್ಳಾರಿ: ‘ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿಗಳಿಗೆ ಗ್ರಾಮಗಳಲ್ಲಿ ಛೀಮಾರಿ ಸ್ವಾಗತ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ರೈತರಿಗೆ ಕರೆ ನೀಡಿದ್ದಾರೆ.
‘ರೈತರು ಸಂಕಷ್ಟದಲ್ಲಿ ಇದ್ದಾರೆ. ರಾಜಕಾರಣಿಗಳು ಚುನಾವಣೆ ಗುಂಗಿನಲ್ಲಿದ್ದು, ಪ್ರಚಾರಕ್ಕೆಂದು ಗ್ರಾಮಗಳಿಗೆ ಬಂದರೆ ‘ಛೀಮಾರಿ ಸ್ವಾಗತ’ ನೀಡಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
‘ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ದನಕರುಗಳಿಗೆ ಮೇವಿಲ್ಲ. ರಾಜ್ಯದಲ್ಲಿರುವ 40 ಲಕ್ಷ ಪೈಕಿ 10 ಲಕ್ಷ ಕೃಷಿ ಕೊಳವೆಬಾವಿಗಳು ಬತ್ತಿವೆ. ವಿದ್ಯುತ್ ಸಮಸ್ಯೆಯು ಇದೆ ಇದೆ’ ಎಂದು ಅವರು ಸಮಸ್ಯೆಗಳನ್ನು ಪಟ್ಟಿ ಮಾಡಿದರು.
‘ಬರಗಾಲದಲ್ಲಿ ಕೃಷಿ ಸಾಲ ವಸೂಲಿ ಮಾಡದಂತೆ ಎಲ್ಲ ಬ್ಯಾಂಕ್, ಸಹಕಾರ ಸಂಘಗಳಿಗೆ ಸರ್ಕಾರ ಆದೇಶ ನೀಡಿದೆ. ಆದರೂ ರೈತರಿಂದ ಸಾಲ ವಸೂಲಾತಿ ಮುಂದುವರೆದಿದೆ‘ ಎಂದು ಆರೋಪಿಸಿದರು.