ಗಂಗಾವತಿ: ಆಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಜೈಲುಶಿಕ್ಷೆ ಅನುಭವಿಸಿ, ಷರತ್ತಿನನ್ವಯ ಹೊರಬಂದಿರುವ ಜನಾರ್ದನ ರೆಡ್ಡಿಗೆ ಗಂಗಾವತಿಯ ಜನ ಮತ ಹಾಕಬಾರದು ಎಂದು ಹೋರಾಟಗಾರ ಟಪಾಲ್ ಗಣೇಶ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ‘ರೆಡ್ಡಿ ಕಾನೂನು ಚೌಕಟ್ಟು ಮೀರಿ ಆಕ್ರಮವೆಸುಗುವ ವ್ಯಕ್ತಿ. ಓಬಳಾಪುರ ಮೈನಿಂಗ್ ಪರವಾನಗಿ ಪಡೆದಿದ್ದ ರೆಡ್ಡಿ, 2008ರಲ್ಲಿ ಕರ್ನಾಟಕದಲ್ಲಿ ಸಚಿವರಾಗಿ ಗಡಿಭಾಗದ ಗಿರಿಜನರ ಸುಂಕಲಮ್ಮ ದೇವಸ್ಥಾನ ಧ್ವಂಸಗೊಳಿಸಿ ಖನಿಜ ಸಂಪತ್ತು ದೋಚಿದ್ದಾರೆ. ಬಳ್ಳಾರಿ ಭಾಗದ ಅಪಾರ ನೈಸರ್ಗಿಕ ಸಂಪತ್ತು ಕೊಳ್ಳೆಹೊಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ರೆಡ್ಡಿ ಭರವಸೆ ನೀಡಿದ ಯಾವ ಕೆಲಸಗಳನ್ನೂ ಮಾಡುವುದಿಲ್ಲ. ಜನರನ್ನು ಯಾಮಾರಿಸಿ ಚುನಾವಣೆ ಮುಗಿದ ಬಳಿಕ ಗಂಗಾವತಿ ಖಾಲಿ ಮಾಡುತ್ತಾರೆ. ಕೆಆರ್ಪಿಪಿ ಪಕ್ಷ ಸ್ಥಾಪಿಸಿ ತಮ್ಮ ಮೇಲಿನ ಪ್ರಕರಣಗಳಿಂದ ಮುಕ್ತಿ ಪಡೆಯಲು ಅಧಿಕಾರಕ್ಕೆ ಹಪಾಹಪಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆ ಪಕ್ಷಕ್ಕೆ ಮತ ಹಾಕಬಾರದು’ ಎಂದರು.
‘ರೆಡ್ಡಿಯನ್ನು ಸಂಪರ್ಕಿಸಲು ಸಾಮಾನ್ಯ ಜನರಿಗೆ ಅಸಾಧ್ಯ. ನೂರು ಜನರನ್ನು ದಾಟಿ ಹೋಗಬೇಕು. ಗಂಗಾವತಿ ಕ್ಷೇತ್ರದಿಂದ ಗೆದ್ದರೆ ಜನರಿಗೆ ಸಿಗುವುದೇ ದುಸ್ತರವಾಗುತ್ತದೆ. ಇಲ್ಲಿನ ಪೊಲೀಸ್ ಅಧಿಕಾರವನ್ನು ತೆಕ್ಕೆಗೆ ತೆಗೆದುಕೊಂಡು, ಬಳ್ಳಾರಿಯಿಂದ ಗೂಂಡಾಗಳನ್ನ ಕೆರೆಯಿಸಿ, ಕ್ಷೇತ್ರವನ್ನೆ ಹಾಳು ಮಾಡುತ್ತಾರೆ’ ಎಂದರು.
‘ರೆಡ್ಡಿ ಬಳಿ ಹೋದವರೆಲ್ಲ ದುಡ್ಡುಗಾಗಿ ಬಿಟ್ಟರೆ, ಬೇರೆ ಯಾವ ಉದ್ದೇಶಕ್ಕೂ ಹೋಗುವುದಿಲ್ಲ. ಕನ್ನಡ ನೆಲ, ಜಲ, ಭಾಷೆ ಕಾಪಾಡುವ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮೊದಲು ರೆಡ್ಡಿ ಹಿನ್ನಲೆ ತಿಳಿಯಬೇಕು. ಸುಮ್ಮನೆ ಅಭಿವೃದ್ಧಿ ಮಾಡುತ್ತಾನೆ ಎನ್ನುವ ಭ್ರಮೆಯಿದ್ದರೆ ಕೂಡಲೇ ಪಕ್ಷ ಬಿಟ್ಟು ಹೊರಗಡೆ ಬನ್ನಿ’ ಎಂದು ಮನವಿ ಮಾಡಿದರು.