ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾತಿಚರಾಮಿ: ಮೈ–ಮನದ ನಡುವಣ ಸಂಘರ್ಷ

Last Updated 29 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಸಾಗರವನ್ನು ಸೇರಲು ಹೊರಟ ನದಿ ಹೊರಗಿನವರ ಕಣ್ಣಿಗೆ ಪ್ರಶಾಂತವಾಗಿಯೇ ಕಾಣುತ್ತದೆ. ಅದರೊಳಗೆ ಇಳಿದವರಿಗೆ ಮಾತ್ರ ಅದರ ಸುಳಿ–ಆಳ ಅರಿವಿಗೆ ಬರುವುದು. ಸಂಗಮದ ಈ ಪ್ರಕ್ರಿಯೆಯಲ್ಲಿ ನದಿಯ ಅನಿವಾರ್ಯತೆ, ಉತ್ಕಟತೆಯನ್ನು ಹೆಣ್ಣಿನ ಮೂಲಕ ಅನಾವರಣಗೊಳಿಸುವ ಚಿತ್ರ ನಾತಿಚರಾಮಿ.

‘ನನ್ನ ದೇಹದ ಬಯಕೆಯನ್ನು ಈಡೇರಿಸುತ್ತೀರಾ’ ಎಂದು ಹೆಣ್ಣೊಬ್ಬಳು ಗಂಡಿಗೆ ನೇರವಾಗಿ ಸಂದೇಶ ಕಳುಹಿಸುವ ಕಥೆಯನ್ನು ಸಿನಿಮಾ ಮಾಡಲು ಧೈರ್ಯ ಬೇಕು. ಅಂತಹ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಮಂಸೋರೆ, ನಟಿಸುವ ಮೂಲಕ ಶ್ರುತಿ ಹರಿಹರನ್‌ ಆ ಧೈರ್ಯ ಪ್ರದರ್ಶಿಸಿದ್ದಾರೆ. ‘ದೇಹದ ಬಯಕೆಯನ್ನು ನೇರವಾಗಿಯಾಗಲಿ, ಪರೋಕ್ಷವಾಗಿ ಆಗಲಿ ಹೇಳಿ ಬಿಟ್ರೆ ಹೆಣ್ಮಕ್ಕಳು ಚೀಪ್‌ ಆಗಿಬಿಡ್ತೀವಲ್ವ’ ಎಂದು ಅವರು ಹೇಳುವ ಸಂಭಾಷಣೆ ಈ ದಿಟ್ಟತನಕ್ಕೆ ಸಾಕ್ಷಿ.

ಮದುವೆಯಾದ ಹೊಸತರಲ್ಲಿಯೇ ಗಂಡನನ್ನು ಕಳೆದುಕೊಳ್ಳುವ ಗೌರಿ (ಶ್ರುತಿ), ವಿಧವೆ ಎಂದು ಅನುಕಂಪ ತೋರಿಸುವ, ಸಂದರ್ಭದ ಲಾಭ ಪಡೆಯಲು ಹವಣಿಸುವವರನ್ನು ಕಂಡರೆ ಉರಿದು ಬೀಳುವ ಹೆಣ್ಣು. ಮನಸು ಹಿಡಿತದಲ್ಲಿದ್ದರೂ, ದೇಹ ಮಾತು ಕೇಳದಾದಾಗ ಸಂದಿಗ್ಧಕ್ಕೆ ಸಿಲುಕುವ ಗೌರಿ, ಇಂತಹ ವಿಷಯಗಳನ್ನು ಹಂಚಿಕೊಳ್ಳಬಹುದಾದ ‘ನಂಬಿಕಸ್ಥ’ ಕಣ್ಣುಗಳಿಗೆ ಹುಡುಕಾಡ ತೊಡಗುತ್ತಾಳೆ. ಅಸಹಜ ಸಮಸ್ಯೆಗಳಿಗೆ ಅಸಹಜ ಪರಿಹಾರಗಳನ್ನೇ ಕಂಡುಕೊಳ್ಳಬೇಕು ಎಂಬ ಮನೋವೈದ್ಯನ ಸಲಹೆಯಂತೆಯೇ ಇಡೀ ಸಿನಿಮಾ ಸಾಗುತ್ತದೆ.

ಕಾಮವೇ ಪ್ರಮುಖ ಕಥಾವಸ್ತುವಾದರೂ, ಪ್ರೀತಿ–ಸಂಬಂಧ–ಸಮಾಜದ ಎಳೆಗಳೂ ಕಥೆಯನ್ನು ಸುತ್ತಿಕೊಂಡಿವೆ. ಹೆಚ್ಚು ಹಣ ಸಂಪಾದಿಸಬೇಕು, ದೊಡ್ಡ ಹೆಸರು ಮಾಡಬೇಕು ಎಂಬ ಒತ್ತಡದಲ್ಲಿ ಚೇಳು ಕಡಿದವನಂತೆ ವರ್ತಿಸುವ ಸುರೇಶ್‌ (ಸಂಚಾರಿ ವಿಜಯ್‌) ಆಧುನಿಕ ಮಧ್ಯಮವರ್ಗದ ಪುರುಷರ ಪ್ರತಿನಿಧಿಯಂತೆ ಕಾಣಿಸುತ್ತಾನೆ. ಹೆಂಡತಿಯೊಂದಿಗಿನ ಲೈಂಗಿಕ ಕ್ರಿಯೆಯನ್ನು, ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ಟೈಪ್‌ ಮಾಡಿದಷ್ಟೇ ಯಾಂತ್ರಿಕವಾಗಿ ನೋಡುವ ಸುರೇಶ್‌, ಪರಸ್ತ್ರೀಯ ಕಾಮಾಸಕ್ತಿಯನ್ನು ಅವಳ ಕುಟುಂಬದ ಹಿನ್ನೆಲೆಗೆ ಥಳಕು ಹಾಕುವ ವ್ಯಕ್ತಿ. ಪತಿಯ ನಿರ್ಲಕ್ಷ್ಯವನ್ನು ನುಂಗಿ ಅವನ ಪ್ರೀತಿಗಾಗಿ ಹಾತೊರೆಯುವ ಪಾತ್ರದಲ್ಲಿ ಶರಣ್ಯ ಇಷ್ಟವಾಗುತ್ತಾರೆ. ಅಲ್ಲದೆ, ‘i am being used ಎಂದೆನಿಸುವುದು ಹೆಣ್ಣಿಗೆ ಮಾತ್ರವಲ್ಲ, ಗಂಡಸರಿಗೂ ಕೂಡ’ ಎಂದು ಪಾತ್ರವೊಂದರಿಂದ ಹೇಳಿಸುವ ಮೂಲಕ ಪುರುಷರ ಭಾವನೆಗಳ ಮೇಲೂ ನಿರ್ದೇಶಕರು ಬೆಳಕು ಚೆಲ್ಲಿದ್ದಾರೆ.

ಎರಡನೇ ಸಂಬಂಧ ಅಪರಾಧ. ಬಹಿರಂಗವಾದರೆ ಸಮಾಜ ಏನೆಂದುಕೊಳ್ಳುತ್ತದೆ ಎಂದು ಹೆದರಿಕೊಳ್ಳುವವರ ನಡುವೆ, ಎಲ್ಲವೂ ನಮ್ಮ ಅನುಕೂಲವನ್ನು ಅವಲಂಬಿಸಿರುತ್ತದೆ ಎಂದು ಸಹಜವಾಗಿ ಬದುಕುವ ಕೆಲಸದಾಕೆ ಜಯಮ್ಮಳ ಮನೋಭಾವ ಗೌರಿ– ಸುರೇಶ್‌ ಜೀವನಕ್ಕೆ ಪಾಠ ಹೇಳುತ್ತದೆ. ಇಬ್ಬರ ಜೀವನದಲ್ಲಿಯೂ ಕೊನೆಗೆ ಹೊಸಗಾಳಿ ಬೀಸಲಾರಂಭಿಸುತ್ತದೆ.

ಅರ್ಥಗರ್ಭಿತ ಸಂಭಾಷಣೆ–ನಟ ನಟಿಯರ ಹದವರಿತ ಅಭಿನಯ ಸಿನಿಮಾದ ಶಕ್ತಿ. ಸಂಕಲನಕಾರ ತಮ್ಮ ಕತ್ತರಿಯನ್ನು ಇನ್ನಷ್ಟು ಮೊನಚುಗೊಳಿಸಿದ್ದರೆ ಚಿತ್ರಕ್ಕೆ ವೇಗ ಸಿಗುತ್ತಿತ್ತು. ನವರಸಗಳಂತಹ ಕಮರ್ಷಿಯಲ್‌ ಅಂಶಗಳನ್ನು ಬಯಸಿ ಸಿನಿಮಾಗೆ ಹೋಗುವವರಿಗೆ ‘ನಾತಿಚರಾಮಿ’ ಇಷ್ಟವಾಗುವುದು ಕಷ್ಟ. ಆದರೆ, ಈ ವರ್ಷದ ವಿಶಿಷ್ಟ ಪ್ರಯೋಗಾತ್ಮಕ ಚಿತ್ರಗಳ ಸಾಲಲ್ಲಿ ನಿಲ್ಲುವ ಎಲ್ಲ ಅಂಶಗಳನ್ನು ಈ ಸಿನಿಮಾ ಹೊಂದಿದೆ ಎನ್ನಬಹುದು.

ನಾತಿಚರಾಮಿ ನಿರ್ದೇಶನ: ಮಾಂಸೋರೆ

ನಿರ್ಮಾಣ: ತೇಜಸ್ವಿನಿ ಎಂಟರ್‌ಪ್ರೈಸಸ್‌

ತಾರಾಗಣ: ಶ್ರುತಿ ಹರಿಹರನ್‌, ಸಂಚಾರಿ ವಿಜಯ್‌, ಶರಣ್ಯ, ಪೂರ್ಣಚಂದ್ರ ಮೈಸೂರು, ಬಾಲಾಜಿ ಮನೋಹರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT