ಕೇರಳದಲ್ಲಿ ದೇಗುಲ ಪ್ರವೇಶಕ್ಕೆ ತಡೆ: ಧಾರ್ಮಿಕ ತಾರತಮ್ಯದ ಆರೋಪ ಮಾಡಿದ ಅಮಲಾ ಪೌಲ್
ಚೆನ್ನೈ: ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನ ಪ್ರವೇಶ ಕುರಿತಂತೆ ಅಧಿಕಾರಿಗಳು ಧಾರ್ಮಿಕ ತಾರತಮ್ಯ ತೋರುತಿದ್ದು, ದೇಗುಲ ಪ್ರವೇಶಕ್ಕೆ ತನಗೆ ಅನುಮತಿ ನಿರಾಕರಿಸಿದ್ದಾರೆ ಎಂದು ಬಹುಭಾಷಾ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
‘ಸೋಮವಾರ ದೇವರ ದರ್ಶನಕ್ಕೆ ತೆರಳಿದ್ದ ನನಗೆ ದೇಗುಲ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಅಧಿಕಾರಿಗಳು, ದೇಗುಲದ ಆವರಣದೊಳಗೆ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವ ಸಂಪ್ರದಾಯವಿದೆ ಎಂದು ಹೇಳಿದ್ದು, ಒತ್ತಾಯಪೂರ್ವಕವಾಗಿ ದೇವಸ್ಥಾನದ ಮುಂಭಾಗದ ರಸ್ತೆಯಿಂದಲೇ ದೇವಿಯ ದರ್ಶನಕ್ಕೆ ಸೂಚಿಸಿದರು’ಎಂದು ನಟಿ ಹೇಳಿಕೊಂಡಿದ್ದಾರೆ.
ಘಟನೆ ಬೆಳಕಿಗೆ ಬಂದ ಬಳಿಕ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದ ಟ್ರಸ್ಟ್ ನಡೆಸುತ್ತಿರುವ ದೇವಾಲಯದ ಆಡಳಿತದ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಾಲಯದ ಅಧಿಕಾರಿಗಳು ಅಸ್ತಿತ್ವದಲ್ಲಿರುವ ಶಿಷ್ಟಾಚಾರಗಳನ್ನು ಮಾತ್ರ ಅನುಸರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
‘ಬೇರೆ ಬೇರೆ ಧರ್ಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಆದರೆ, ಅದು ಯಾರಿಗೂ ತಿಳಿದಿಲ್ಲ. ಆದರೆ, ಒಬ್ಬ ಸೆಲೆಬ್ರಿಟಿ ಭೇಟಿ ನೀಡಿದಾಗ ಮಾತ್ರ ಏಕೆ ವಿವಾದವಾಗುತ್ತದೆ’ಎಂದು ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.