ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ‘ಗಂಡಸಿ’, ನಾಗರಾಜ್ ಅವರ ಊರು.ನಾಟಕ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ಅವರು, ಆರಂಭದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಸಿಗದೇ ಹೋದಾಗ ಗಾಂಧಿ ಬಜಾರ್ನಲ್ಲಿ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾಶಿನಾಥ್ ಅವರ ‘ತಾಯೊಗೊಬ್ಬ ತರ್ಲೆ ಮಗ’ ಸಿನಿಮಾ ಮೂಲಕ ವಸ್ತ್ರಾಲಂಕಾರ ಸಹಾಯಕನಾಗಿ ಚಿತ್ರರಂಗದ ಜೀವನ ಆರಂಭಿಸಿದ ಅವರು, ಸುಮಾರು 45 ಸಿನಿಮಾಗಳಲ್ಲಿ ವಸ್ತ್ರ ವಿನ್ಯಾಸಕರಾಗಿ ದುಡಿದಿದ್ದಾರೆ. ನಂತರದಲ್ಲಿ ಉಪೇಂದ್ರ ನಿರ್ದೇಶನದ, ಜಗ್ಗೇಶ್ ಅವರು ನಾಯಕ ನಟನಾಗಿ ನಟಿಸಿದ ‘ತರ್ಲೆ ನನ್ಮಗ’ ಸಿನಿಮಾದಲ್ಲಿ ಮುಖ್ಯ ವಸ್ತ್ರ ವಿನ್ಯಾಸಕರಾಗಿ ಬಡ್ತಿ ಪಡೆದಿದ್ದರು. ಮುಂದೆ ಜಗ್ಗೇಶ್ ಅವರ 38 ಸಿನಿಮಾಗಳಲ್ಲಿ ವಸ್ತ್ರ ವಿನ್ಯಾಸಕರಾಗಿ ದುಡಿದರು. ಸುದೀಪ್ ಅವರ ‘ಸ್ಪರ್ಶ’, ಗಣೇಶ್ ಅವರ ‘ಚೆಲ್ಲಾಟ’, ‘ಹಬ್ಬ’, ‘ಶ್ರೀ ಮಂಜುನಾಥ’, ‘ಅಮೃತವರ್ಷಿಣಿ’ ಹೀಗೆ ಹತ್ತಾರು ಸಿನಿಮಾಗಳಿಗೂ ಅವರು ವಸ್ತ್ರ ವಿನ್ಯಾಸಕಾರರಾಗಿದ್ದರು.